ಕುದುರೆಮುಖ ಶಿಖರ ಹತ್ತಿದಾಗ...

 ಕುದುರೆಮುಖ ಶಿಖರ ಹತ್ತಿದಾಗ...

ಸದಾ ಪೇಟೆಯ ಜಂಜಾಟದ ಮಧ್ಯೆ ಬದುಕುವಾಗ ಅದರಿಂದ ಮುಕ್ತಿ ಪಡೆಯಲು ಸ್ವಲ್ಪ ಸಮಯ ಪ್ರಕೃತಿಯ ಮಧ್ಯೆ ಕಳೆಯಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಇದೇ ಇಚ್ಛೆಯಿಂದ ಕಳೆದ ವರ್ಷ ಗೆಳೆಯರೊಂದಿಗೆ ಬಿಸಿಲೆ,ಚಾರ್ಮಾಡಿ,ದೇವರಮನೆ ಕಡೆಗೆ ಪ್ರವಾಸ ಹೋದ ನನಗೆ ನಂತರ ಅದೇನೋ ಚಾರಣ ಮಾಡಬೇಕೆಂಬ ಆಸೆ ಹುಟ್ಟಿತು. ನನ್ನ ಊರು ಪಶ್ಚಿಮ ಘಟ್ಟದ ತಪ್ಪನಲ್ಲಿದ್ದರೂ ಗೆಳೆಯರೊಂದಿಗೆ ಪ್ರವಾಸ,ಚಾರಣಕ್ಕೆ ಹೋಗುವಾಗ ಸಿಗುವ ಅನುಭವವೇ ಬೇರೆ. ಬಹಳ ವರ್ಷಗಳಿಂದ ಕುಮಾರ ಪರ್ವತಕ್ಕೆ ಚಾರಣ ಹೋಗಬೇಕೆಂದು ಇದ್ದ ನನ್ನ ಆಸೆ ನವೆಬರ್ ತಿಂಗಳಲ್ಲಿ ಈಡೇರಿದ ನಂತರ ಮುಂದೆ ಮತ್ತೊಂದು ಶಿಖರಕ್ಕೆ ಚಾರಣ ಮಾಡಬೇಕೆಂಬ ಆಸೆ ಚಿಗುರಿತು. ಈ ಚಾರಣದ ಹುಚ್ಚು ಎಂದರೆ ಹಾಗೆ. ಒಮ್ಮೆ ಒಂದು ಕಡೆಗೆ ಚಾರಣ ಮಾಡಿದರೆ ಮತ್ತೆ ಇನ್ನೊಂದು ಶಿಖರ ಹತ್ತಬೇಕೆಂಬ ಹಂಬಲ ಹುಟ್ಟುತ್ತದೆ. ಕುಮಾರ ಪರ್ವತ ಚಾರಣ ಮುಗಿಸಿದ ಮೇಲೆ ಗೆಳೆಯರೊಂದಿಗೆ ಮಾತನಾಡುವಾಗ ನೇತ್ರಾವತಿ ಶಿಖರಕ್ಕೆ ಚಾರಣ ಮಾಡಿದರೆ ಹೇಗೆ ಎಂಬ ಆಲೋಚನೆ ಬಂತು. ನಂತರ ಕಳೆದ ತಿಂಗಳು ಚಾರಣದ ಯೋಜನೆ ರೂಪಿಸುತ್ತಿರುವಾಗ ನನ್ನ ಮನಸ್ಸಿನಲ್ಲಿ ಇದ್ದಕ್ಕಿದ್ದಂತೆ ನೇತ್ರಾವತಿ ಶಿಖರದ ಬದಲು ಕುದುರೆಮುಖ ಶಿಖರ ಹತ್ತಿದರೆ ಹೇಗೆ ಎಂದು ನಾನು ನನ್ನಷ್ಟಕ್ಕೆ ಪ್ರಶ್ನಿಸಿಕೊಂಡೆ. ನಂತರ ಗೆಳೆಯರ ಅಭಿಪ್ರಾಯ ಪಡೆದೆ. ಎಲ್ಲರೂ ಕುದುರೆಮುಖ ಶಿಖರ ಹತ್ತುವ ಎಂದು ಹೇಳಿದರು. ಕುದುರೆಮುಖ ನಮ್ಮ ಕರ್ನಾಟಕದ ಎರಡನೆಯ ಎತ್ತರದ ಶಿಖರ. ಹೀಗಾಗಿ ಎರಡನೆಯ ಎತ್ತರದ ಶಿಖರ ಹತ್ತಿದ ಕೀರ್ತಿ ಸಿಗುತ್ತದೆ ಎಂದು ಎಲ್ಲರೂ ಹೊರಟರು.  


 ಕುದುರೆಮುಖ ಪರ್ವತದ ಬಗ್ಗೆ ಹೇಳುವುದಾದರೆ ಕುದುರೆಮುಖ ಶಿಖರ ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಎತ್ತರದ ಶಿಖರಗಳಲ್ಲಿ ಒಂದು. ಇದು ಕರ್ನಾಟಕದ ಎರಡನೆಯ ಎತ್ತರದ ಶಿಖರವಾಗಿದೆ. ಈ ಪರ್ವತವು ಕುದುರೆಯ ಮುಖದ ಆಕಾರದಲ್ಲಿ ಕಾಣುವ ಕಾರಣ ಇದಕ್ಕೆ ಕುದುರೆಮುಖ ಎಂದು ಹೆಸರು ಇಟ್ಟರು. ಈ ಶಿಖರದ ಎತ್ತರ 1892 ಮೀ. ಹಲವಾರು ವಿಶಿಷ್ಟ ಸಸ್ಯ,ಪ್ರಾಣಿ ಪ್ರಭೇದಗಳು ಈ ಕುದುರೆಮುಖ ಪರ್ವತ ಸಾಲುಗಳಲ್ಲಿ ಇದೆ. ಆದ್ದರಿಂದ ಕುದುರೆಮುಖ ಪರ್ವತ ಹಾಗು ಸುತ್ತಮುತ್ತಲಿನ ಪ್ರದೇಶಗಳನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಿ ಈ ವಿಶಿಷ್ಟ ಸಸ್ಯ,ಪ್ರಾಣಿ ಪ್ರಭೇದಗಳನ್ನು ಸಂರಕ್ಷಿಸುವ ಕೆಲಸ ನಡೆಯುತ್ತಿದೆ. ಈ ವಿಶಿಷ್ಟ ಪ್ರಭೇದಗಳಲ್ಲಿ ಸಿಂಗಳಿಕ,ಲಂಗೂರ್ ವಾನರ,ಸಾಂಬಾರ್ ಜಿಂಕೆ,ಹುಲಿ,ಕಾಡುನಾಯಿಗಳು,ಹಾರುವ ಅಳಿಲು ಸೇರಿ ಹಲವಾರು ಪ್ರಾಣಿಗಳು,ಸಸ್ಯ ಸಂಕುಲಗಳು ಒಳಗೊಂಡಿವೆ. ಕುದುರೆಮುಖ ಪರ್ವತ ಸಾಲುಗಳು,ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ,ದಕ್ಷಿಣ ಕನ್ನಡ,ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಬ್ಬಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಪ್ರದೇಶಗಳಲ್ಲಿ ಕುದುರೆಮುಖ ಪರ್ವತ ಸಾಲುಗಳನ್ನು ನೋಡಬಹುದು. ಕುದುರೆಮುಖ ಶಿಖರದಿಂದ ಅರಬ್ಬಿ ಸಮುದ್ರ,ಮಂಗಳೂರು ಸೇರಿ ಹಲವಾರು ನಗರಗಳು ಕಾಣಲು ಸಿಗುತ್ತದೆ. ಕುದುರೆಮುಖದಲ್ಲಿ ಕಬ್ಬಿಣ ಅದಿರಿನ ಭಂಡಾರವೇ ಇದೆ. ಮೈಸೂರಿನ ಭೂ ಸಂಶೋಧಕ ಶ್ರೀ ಸಂಪತ್ ಅಯ್ಯಂಗಾರ್ ಅವರು ಇಲ್ಲಿ ಕಬ್ಬಿಣ ಅದಿರಿನ ನಿಕ್ಷೇಪ ಕಂಡು ಹಿಡಿದ ನಂತರ ಕುದುರೆಮುಖ ಐರನ್ ಓರ್ ಕಂಪೆನಿ ಲಿಮಿಟೆಡ್(ಕೆಐಒಸಿಎಲ್) ಎಂಬ ದೊಡ್ಡ ಅದಿರಿನ ಕಂಪೆನಿಯನ್ನು ಅಂದಿನ ಮೈಸೂರು ಸರಕಾರ ಆರಂಭಿಸಿ ಇಲ್ಲಿ ಗಣಿಗಾರಿಕೆಯನ್ನು ಆರಂಭಿಸಿತು. ಬಹಳ ಹೋರಾಟದ ಬಳಿಕ 2006ರಲ್ಲಿ ಇಲ್ಲಿ ಗಣಿಗಾರಿಕೆಯನ್ನ ಸ್ಥಗಿತಗೊಳಿಸಲಾಯಿತು. ಇದಿಷ್ಟು ಕುದುರೆಮುಖದ ಬಗ್ಗೆ ಮಾಹಿತಿ.


 

ಚಾರಣದ ಮಾಹಿತಿ:
ದಿನಾಂಕ 19/01/2024 ನನ್ನ 8 ಗೆಳೆಯರೊಂದಿಗೆ ಮಂಗಳೂರಿನಿಂದ ಸಂಜೆ ಹೊರಟು ಮೂಡಬಿದರೆ ಮಾರ್ಗವಾಗಿ ಪ್ರಯಾಣ ಬೆಳೆಸಿದೆ. ಸಂಜೆ ಬಜಗೊಳಿಯ ಹೋಟೆಲ್ ಭುವನೇಶ್ವರಿಯಲ್ಲಿ ಚಹಾ,ತಿಂಡಿ ಸೇವಿಸಿ ಕುದುರೆಮುಖ ಘಾಟಿಯಾಗಿ ಕಳಸಕ್ಕೆ ಹೋದೆವು. ರಾತ್ರಿ ಕಳಸದಲ್ಲಿ ನನ್ನ ದೊಡ್ಡಮ್ಮನ ಮನೆಯಲ್ಲಿ ತಂಗಿದೆವು. ಕುದುರೆಮುಖ ಚಾರಣದ ಮಾಹಿತಿಯನ್ನು ಯಾರಲ್ಲಿ ಕೇಳುವುದು ಎಂದು ನಾನು ಯೋಚಿಸುತ್ತಿರುವಾಗ ಕೂಡಲೆ ಕಳಸದಲ್ಲಿರುವ ನನ್ನ ದೊಡ್ಡಮ್ಮನ ಬಳಿ ಕೇಳಿದರೆ ಹೇಗೆ ಎಂದು ಆಯಿತು. ಅವರು ನನಗೆ ಮಾಹಿತಿ ಪಡೆಯಲು ಸಹಕರಿಸಿದರು. ಅಷ್ಟೇ ಅಲ್ಲ,ಚಾರಣಕ್ಕೆ ಹೋಗುವಾಗ ಒಂದು ದಿನ ಮೊದಲು ಬರುವುದಾದರೆ ತಂಗಲು ಇಲ್ಲಿಗೆ ಬನ್ನಿ ಅಂತ ನನಗೆ ಹೇಳಿಯೇ ಬಿಟ್ಟರು! ಅವರಲ್ಲಿ ನಮಗೆ ಆ ಚಳಿಯ ವಾತಾವರಣದ ನಡುವೆ ಬಿಸಿ ನೀರಿನ ಸ್ನಾನ,ರುಚಿರುಚಿಯಾದ ಊಟ,ತಿಂಡಿ,ನಿದ್ರೆ ಮಾಡಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಅವರು ಹಾಗು ದೊಡ್ಡಪ್ಪ ಮಾಡಿಕೊಟ್ಟರು. ಒಟ್ಟಿನಲ್ಲಿ ನಮಗೆ ಅಲ್ಲಿ ಬಹಳ ಒಳ್ಳೆಯ ಉಪಚಾರ ಆಯಿತು. ಗೆಳೆಯರು,ನಮ್ಮ ವಾಹನದ ಚಾಲಕರು ಬಹಳ ಸಂತೋಷಪಟ್ಟರು. ಮರುದಿನ ಮುಂಜಾನೆ ದೊಡ್ಡಮ್ಮ ನಮಗೆಲ್ಲರಿಗೆ ತಿಂಡಿಯ ವ್ಯವಸ್ಥೆ ಮಾಡಿದ್ದು ಅಲ್ಲದೆ ಚಾರಣಕ್ಕೆ ಹೋಗುವಾಗ ತೆಗೆದು ಹೋಗಲು ಬುತ್ತಿಯಲ್ಲಿ ತಿಂಡಿಯನ್ನು ಕಟ್ಟಿಕೊಟ್ಟರು. ನಂತರ ಅವರ ಮನೆಯಿಂದ ಹೊರಟ ನಾವು ಸಂಸೆಗೆ ತಲುಪಿದಾಗ ಅಲ್ಲಿ ಕುದುರೆಮುಖ,ನೇತ್ರಾವತಿ ಚಾರಣ ಆರಂಭಿಸುವ ಸ್ಥಳಕ್ಕೆ ಕರೆದುಕೊಂಡು ಹೋಗುವ ಜೀಪು,ಪಿಕಪ್ ನಿಂತಿರುವುದು ಕಂಡಿತು. ನಂತರ ಅವರಲ್ಲಿ ವಿಚಾರಿಸಿದಾಗ ಚಾರಣ ಪ್ರವೇಶ ದರ ಕಟ್ಟಿ ನೊಂದಾವಣಿ,ಗೈಡ್ ಅನ್ನು ನೇಮಿಸುವುದು ಸೇರಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಅವರೇ ಮಾಡಿಕೊಟ್ಟರು.

 
ಕುದುರೆಮುಖ ಚಾರಣ ಒಂದು ದಿನದ ಚಾರಣ ಆಗಿದೆ.ಕುದುರೆಮುಖ ಶಿಖರಕ್ಕೆ ಚಾರಣ ವರ್ಷ ಪೂರ್ತಿ ನಡೆಯುತ್ತದೆ. ಇಲ್ಲಿ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯ ತನಕ ಚಾರಣಕ್ಕೆ ಹೋಗಲು ಬಿಡುತ್ತಾರೆ. ಕುದುರೆಮುಖ ಚಾರಣ ಆರಂಭ ಆಗುವುದು ಸಂಸೆ ಬಳಿಯ ಮುಳ್ಳೋಡಿ ಎಂಬಲ್ಲಿಂದ. ಇಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸಿಗುತ್ತದೆ. ಸಂಸೆಯಿಂದ ಈ ಚೆಕ್ ಪೋಸ್ಟಿಗೆ ಸುಮಾರು 6 ಕಿಲೋಮಿಟರ್ ಆಗುತ್ತದೆ. ಮಣ್ಣು,ಕಾಂಕ್ರೀಟ್ ರಸ್ತೆಗಳಿಂದ ಕೂಡಿರುವ ಕಾರಣ ಚೆಕ್ ಪೋಸ್ಟ್ ತನಕ ಜೀಪು ಅಥವ ಪಿಕಪಿನಲ್ಲಿ ಹೋದರೆ ಒಳ್ಳೆಯದು.
ಕುದುರೆಮುಖ ಚಾರಣಕ್ಕೆ ಪ್ರತಿಯೊಬ್ಬರಿಗೆ 575ರೂ ದರವಿದೆ. ಇಲ್ಲಿ ಮಾರ್ಗದರ್ಶಕರನ್ನು ಜೊತೆಗೆ ಕಳೆದುಕೊಂಡು ಹೋಗುವುದು ಕಡ್ಡಾಯವಾಗಿದೆ. 575ರೂ ಜೊತೆಗೆ ಒಂದು ತಂಡಕ್ಕೆ(ಗರಿಷ್ಠ 10 ಚಾರಣಿಗರ ತಂಡ) 1000ರೂ ಮಾರ್ಗದರ್ಶಕರ ದರ ನಿಗದಿಪಡಿಸಲಾಗಿದೆ. ಚಾರಣದ ಬುಕ್ಕಿಂಗ್ ಅನ್ನು ಮೊದಲೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಧಿಕೃತ ಜಾಲತಾಣದಲ್ಲಿ ಮಾಡಿದರೆ ಒಳ್ಳೆಯದು. ಇಲ್ಲದಿದ್ದರೆ ಚಾರಣಕ್ಕೆ ಬಂದೈ ಹೆಚ್ಚು ಜನ ಇದ್ದರೆ ನಿಮ್ಮನ್ನು ಬಿಡದೆ ಇರುವ ಸಾಧ್ಯತೆ ಇರುತ್ತದೆ.
 

 

ಚಾರಣದ ದಾರಿ:


ದಾರಿ 1: ಮುಳ್ಳೋಡಿ-ಒಂಟಿಮರ(4.5ಕಿ.ಮಿ) 

ನಾನು ಆಗ ಹೇಳಿದ ಹಾಗೆ ಮುಳ್ಳೋಡಿಯ ಚೆಕ್ ಪೋಸ್ಟ್ ಕುದುರೆಮುಖ ಚಾರಣದ ಆರಂಭ ಸ್ಥಳ. ಇಲ್ಲಿ ನೀವು ತೆಗೆದುಕೊಂಡು ಬರುವ ಬ್ಯಾಗ್ ಅನ್ನು ಅಲ್ಲಿಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಾರೆ. ಪ್ರೊಇಯೊಂದು ಪ್ಲಾಸ್ಟಿಕ್ ಅನ್ನು ತೆಗೆದು ಅವುಗಳಲ್ಲಿ ಕಟ್ಟಿಕೊಂಡು ಬಂದ ವಸ್ತುಗಳು ಅನಿವಾರ್ಯವಾಗಿ ಬೇಕಾದರೆ ಅದನ್ನು ಬೇರೆ ಬುತ್ತಿಗಳಲ್ಲಿ ಕಟ್ಟಿಕೊಂಡು ಹೋಗಲೂ ಹೇಳುತ್ತಾರೆ. ಇದು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತ ಪ್ರದೇಶ.ಹಾಗಾಗಿ ಚಾರಣಕ್ಕೆ ಹೋಗುವಾಗ ಪರಿಶೀಲಿಸಿ ಪ್ಲಾಸ್ಟಿಕ್ ತೊಟ್ಟೆಗಳನ್ನು ವಶಪಡಿಸಿಕೊಳ್ಳುತ್ತಾರೆ. ಹೀಗಾಗಿ ನೀವು ಬರುವಾಗ ಸಾಧ್ಯವಾದಷ್ಟು ಪ್ಲಾಸ್ಟಿಕ್ ತರಬೇಡಿ. ಮುಳ್ಳೋಡಿಯ ಚೆಕ್ ಪೋಸ್ಟಿನಲ್ಲಿ ನಮಗೆ ಮಾರ್ಗದರ್ಶಕರಾಗಿ ಒಬ್ಬರನ್ನು ನೇಮಿಸಲಾಯಿತು. ಅವರ ಹೆಸರು ಮಂಜುನಾಥ್. ಅವರ ಜೊತೆಗೆ ಚೆಕ್ ಪೋಸ್ಟಿನಿಂದ ಚಾರಣ ಆರಂಭಿಸಿದ ನಮಗೆ ಆರಂಭದಲ್ಲಿ ಸುಮಾರು 3-4 ಕಿಲೋಮೀಟರ್ ತನಕ ನಮ್ಮ ಹಳ್ಳಿಗಳಲ್ಲಿ ಇರುವ ಕಾಲುದಾರಿಯ ರೀತಿಯ ರಸ್ತೆ ಸಿಗುತ್ತದೆ. ಸ್ವಲ್ಪ ಸಮತಟ್ಟಾದ ಪ್ರದೇಶಗಳು,ಕಾಡುಗಳ ನಡುವೆ,ಸಣ್ಣ ತೋಡುಗಳನ್ನು ದಾಟಿ ನಡೆದುಕೊಂಡು ಹೋಗಬೇಕು. ನಂತರ ಒಂಟಿ ಮರ ಸಮೀಪಿಸುತ್ತಿದಂತೆ ಒಂದು ಕಿಲೋಮೀಟರಿನ ಹಾದಿ ಕಡಿದಾದ ದಾರಿಯಿಂದ ಕೂಡಿದೆ. ಇಲ್ಲಿ ನೀವು ಹತ್ತಿಕೊಂಡು ಹೋಗಬೇಕು. ಈ ಕಡಿದಾದ ದಾರಿಯನ್ನು ಹತ್ತಿ,ಸ್ವಲ್ಪ ದೂರ ನಡೆದುಕೊಂಡು ಹೋದರೆ ಒಂಟಿ ಮರ ಸಿಗುತ್ತದೆ. ಒಂಟಿ ಮರ ಎಂದು ಯಾಕೆ ಈ ಸ್ಥಳವನ್ನು ಕರೆಯುತ್ತಾರೆ ಎಂಬ ಪ್ರಶ್ನೆ ನಿಮಗೆ ಇರಬಹುದು. ಈ ಪ್ರದೇಶವು ಹುಲ್ಲುಗಾವಲಿನಿಂದ ಕೂಡಿದ ಪ್ರದೇಶ. ಈ ಹುಲ್ಲುಗಾವಲಿನ ನಡುವೆ ಇರುವುದು ಕೇವಲ ಒಂದೇ ಮರ. ಹಾಗಾಗಿ ಈ ಪ್ರದೇಶವನ್ನು ಒಂಟಿ ಮರ ಎಂದು ಕರೆಯುತ್ತಾರೆ. ಮುಳ್ಳೋಡಿ ಚೆಕ ಪೋಸ್ಟಿನಿಂದ ಚಾರಣ ಆರಂಭಿಸಿ ಸುಮಾರು ಒಂದು ಕಿಲೋಮೀಟರ್ ನಡೆದ ಕೂಡಲೆ ಕುದುರೆಮುಖ ಶಿಖರ ಕಾಣಲು ಸಿಗುತ್ತದೆ. ಒಂಟಿಮರದಲ್ಲಿ ಕುದುರೆಮುಖ ಶಿಖರ ಇನ್ನು ಹೆಚ್ಚು ಚೆನ್ನಾಗಿ ಸ್ವಲ್ಪ ಹತ್ತಿರದಿಂದ ನೋಡಬಹುದು. ಈ ಒಂಟಿಮರ ಚಾರಣದ ಹಾದಿಯ ಮಧ್ಯ ಪ್ರದೇಶ. ಚಾರಣದ ದಾರಿಯಲ್ಲಿ ಅಧಿಕೃತವಾಗಿ ವಿಶ್ರಾಂತಿ ಪಡೆಯಲು ನಿಗದಿಪಡಿಸಿದ ಸ್ಥಳವಿದು. ಇಲ್ಲಿ ಕೂರಲು ಮರದ ಬೆಂಚಿನ ವ್ಯವಸ್ಥೆಯಿದೆ. ಇಲ್ಲಿ ತಿಂಡಿ ತಿಂದು,ವಿಶ್ರಮಿಸಿ ಚಾರಣವನ್ನು ಮುಂದುವರಿಸಬಹುದು.



 

ದಾರಿ 2: ಒಂಟಿಮರ-ಕೊನೆಯ ವಿಶ್ರಾಂತಿ ಸ್ಥಳ(1.5 ಕಿ.ಮಿ)

ಒಂಟಿಮರದಿಂದ ಚಾರಣ ಮುಂದುವರಿಸಿದ ನಮಗೆ ನಂತರ ಬಹಳ ಕಡಿದಾದ ದಾರಿ ಸಿಗಲಿಲ್ಲ. ಒಂಟಿಮರದಿಂದ ಸಿಗುವ ದಾರಿ ಒಂತರ ಘಾಟಿಯ ರಸ್ತೆಯ ಹಾಗೆ. ಒಮ್ಮೆ ಒಂದು ಗುಡ್ಡೆಯಲ್ಲಿ ಒಮ್ಮೆ ರಸ್ತೆ ಸಾಗಿದರೆ ಮತ್ತೆ ಮತ್ತೊಂದು ಗುಡ್ಡೆಯಲ್ಲಿ. ಆ ರಸ್ತೆಯ ಅಂತಿಮ ಸ್ಥಳ ಬರುತ್ತಿದ್ದಂತೆ ತಿರುವು ಸಿಕ್ಕಿ ಸುತ್ತು ಹಾಕಬೇಕು. ಇಲ್ಲಿ ಕಡಿದಾದ ತಿರುವುಗಳು ಸಿಗುತ್ತದೆ. ಈ ಹಾದಿಯಲ್ಲಿ ಸುತ್ತಮುತ್ತಲಿನ ಪರ್ವತಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ದಾರಿಯಲ್ಲಿ ಸಾಗುತ್ತಾ ಹೋದಂತೆ ಕುದುರೆಮುಖ ಶಿಖರಕ್ಕೆ 3 ಕಿ.ಮಿ ಎಂಬ ಫಲಕ ಸಿಗುತ್ತದೆ. ಇಲ್ಲಿ ಸಮೀಪವೇ ಸಣ್ಣ ತೋಡು ಇದೆ. ಚಾರಣಿಗರ ಅನುಕೂಲಕ್ಕೆ ಬೇಕಾಗಿ ಇಲ್ಲಿ ಪೈಪ್ ಅಳವಡಿಸಲಾಗಿದೆ. ಹಾಗಾಗಿ ಕುಡಿಯುವ ನೀರನ್ನು ನೀವು ಇಲ್ಲಿ ತುಂಬಿಸಬಹುದು ಜೊತೆಗೆ ಇಲ್ಲಿಯೆ ನೀರು ಕುಡಿದು,ತಿಂಡಿ ತಿಂದು ಶಿಖರ ಹತ್ತಬಹುದು. ಈ 1.5 ಕಿಲೋಮಿಟರಿನ ದಾರಿಯಲ್ಲಿ ನಿಮಗೆ ಕನಿಷ್ಠಪಕ್ಷ 3-4 ಕಡೆಗಳಲ್ಲಿ ನೀರಿನ ತೋಡುಗಳು ಸಿಗುತ್ತದೆ. ಇವೆಲ್ಲವೂ ಕುಡಿಯುವ ನೀರಿನ ಮೂಲ. ಕೊನೆಯ 3 ಕಿಲೋಮಿಟರ್ ಫಲಕದ ಬಳಿ ನೀರು ಸಿಕ್ಕರೆ ಮತ್ತೆ ಸಿಗುವುದು ಶಿಖರದ ಬಳಿ. ಹಾಗಾಗಿ ಇಲ್ಲಿಯೇ ನೀರು ತುಂಬಿಸಿ ಮುಂದೆ ಹೋದರೆ ಒಳ್ಳೆಯದು.
 




ದಾರಿ 3:ಕೊನೆಯ ವಿಶ್ರಾಂತಿ ಸ್ಥಳ-ಕುದುರೆಮುಖ ಶಿಖರ(3 ಕಿ.ಮಿ)

3 ಕಿ.ಮಿ ಸೂಚನ ಫಲಕದ ಬಳಿಯಿಂದ ಕುದುರೆಮುಖ ಶಿಖರದವರೆಗಿನ ದಾರಿ ಕಡಿದಾದ ರಸ್ತೆಗಳಿಂದ ಕೂಡಿದೆ. ಈ ಕಡಿದಾದ ರಸ್ತೆಯಲ್ಲಿ ಸಾಗುತ್ತಾ ಹೋದಂತೆ ಸುತ್ತಮುತ್ತಲಿನ ಪರ್ವತಗಳ ವಿಹಂಗಮ ನೋಟ ಹಾಗು ಹಚ್ಚಹಸಿರಿನಿಂದ ಕೂಡಿದ ಕಾಡು,ದೂರದಲ್ಲಿ ಹಲವಾರು ಪಟ್ಟಣಗಳನ್ನು ನೋಡಬಹುದು.ಜೊತೆಗೆ ಚಾರಣದ ಹಾದಿಯನ್ನು ಇಲ್ಲಿ ನೋಡಬಹುದು. ಶಿಖರದ ಹತ್ತಿರ ತಲುಪಿದಂತೆ ಅಲ್ಲಿ ಸಣ್ಣ ತೋಡು ಸಿಗುತ್ತದೆ. ಇಲ್ಲಿ ಬಾಟಲಿಗಳಲ್ಲೀ ನೀರು ತುಂಬಿಸಿಕೊಳ್ಳಬಹುದು. ನಂತರ ಈ ಸ್ಥಳದಿಂದ ಶಿಖರಕ್ಕೆ ಇರುವುದು ಕೇವಲ 200ಮೀ. ಇಷ್ಟು ದೂರವನ್ನು ಹತ್ತಿದರೆ ಕುದುರೆಮುಖ ಶಿಖರ ತಲುಪಬಹುದಾಗಿದೆ. ನಾವು ಶಿಖರ ತಲುಪಿದಾಗ ಮೋಡ ಮುಸುಕಿದ ವಾತಾವರಣದಿಂದ ದೂರದ ಸ್ಥಳಗಳ ಒಳ್ಳೆಯ ನೋಟ ಸಿಗಲಿಲ್ಲ. ಸಾಧಾರಣವಾಗಿ ಇಲ್ಲಿ ಸಾಮಾನ್ಯ ವಾತಾವರಣ ಇದ್ದರೆ ಶಿಖರದಿಂದ ಗಡಾಯಿಕಲ್ಲು,ಧರ್ಮಸ್ಥಳ,ಉಜಿರೆ,ಬೆಳ್ತಂಗಡಿ,ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಸ್ಥಳಗಳು,ಕುಮಾರ ಪರ್ವತ ಸೇರಿ ಹಲವಾರು ಪರ್ವತ ಶಿಖರಗಳು,ಅರಬ್ಬಿ ಸಮುದ್ರ ಕಾಣಲು ಸಿಗುತ್ತದೆ ಎಂದು ಮಾರ್ಗದರ್ಶಕರು ಹೇಳಿದರು. ನಮಗೆ ಅದ್ಭುತ ನೋಟವನ್ನು ಕಾಣುವ ಅವಕಾಶ ಸಿಗಲಿಲ್ಲ. ಮೋಡ ಸರಿಯುತ್ತದೋ ಎಂದು ಸ್ವಲ್ಪ ಹೊತ್ತು ಕಾದೆವು. ಆದರೆ ಏನು ಪ್ರಯೋಜನವಾಗಲಿಲ್ಲ. ಮುಳ್ಳೋಡಿಯ ಚೆಕ್ ಪೋಸ್ಟಿನಿಂದ ಬೆಳಗ್ಗೆ 8:35ಕ್ಕೆ ಹೊರಟ ನಾವು ಮಧ್ಯಾಹ್ನ 12:10ಕ್ಕೆ ಕುದುರೆಮುಖ ಶಿಖರ ತಲುಪಿದೆವು. ಶಿಖರದಲ್ಲಿ ವಿಶ್ರಾಂತಿ ಪಡೆದು,ಫೋಟೋ ತೆಗೆದು,ಆಹಾರ ಸೇವಿಸಿ ಮಧ್ಯಾಹ್ನ 1 ಗಂಟೆಗೆ ಶಿಖರದಿಂದ ಹೊರಟು ಮಧ್ಯಾಹ್ನ 3:25ಕ್ಕೆ ಚೆಕ್ ಪೋಸ್ಟಿಗೆ ಮರಳಿದೆವು.

 
ಕುದುರೆಮುಖ ಚಾರಣಕ್ಕೆ ಇರುವುದು ಇದೊಂದೇ ದಾರಿ.ಸಂಸೆಯಿಂದ ಮುಳ್ಳೋಡಿಯ ತನಕ 6 ಕಿಲೋಮಿಟರ್ ನಡೆದುಕೊಂಡೇ ಹೋಗಬಹುದು ಅಥವ ಜೀಪು,ಪಿಕಪಿನಲ್ಲಿ ಹೋಗಬಹುದು. ಜೀಪು ಅಥವ ಪಿಕಪಿಗೆ ಸಂಸೆಯಿಂದ ಮರಳಿ ಸಂಸೆಗೆ ತಂಡಕ್ಕೆ 2000ರೂ ನಿಗದಿಪಡಿಸಲಾಗಿದೆ. ಮುಳ್ಳೋಡಿಯ ರಸ್ತೆ ಪ್ರಾರಂಭ ಆಗುವುದು ಸಂಸೆಯಲ್ಲಿರುವ ಬಾಳ್ಗಲ್ ಎಂಬಲ್ಲಿಂದ. ವಾಹನದವರು ನಿಮ್ಮನ್ನು ಸಂಸೆ ಪೇಟೆಯವರೆಗೆ ಅಥವ ಬಾಳ್ಗಲ್ ತನಕ ಬಿಡುತ್ತಾರೆ. 

ಕುದುರೆಮುಖ ಚಾರಣಕ್ಕೆ ಬರುವವರು ತಮ್ಮ ಸ್ವಂತ ವಾಹನದಲ್ಲಿ ಬರುವುದಾದರೆ ಸಂಸೆಯ ತನಕ ಬರಬಹುದು. ಕುದುರೆಮುಖ ಶಿಖರಕ್ಕೆ ಹತ್ತಿರದಲ್ಲಿರುವ ಪ್ರಮುಖ ನಗರ ಎಂದರೆ ಕಳಸ. ಕರ್ನಾಟಕದ ಹಲವು ಸ್ಥಳಗಳಿಂದ ಕಳಸ,ಹೊರನಾಡಿಗೆ ಹೋಗುವ ಬಸ್ಸುಗಳಲ್ಲಿ ಕಳಸಕ್ಕೆ ಬಂದರೆ ಅಲ್ಲಿಂದ ಮಂಗಳೂರು,ಉಡುಪಿ ಕಡೆಗೆ ಹೋಗುವ ಬಸ್ಸುಗಳಲ್ಲಿ ಅಥವ ಬೇರೆ ವಾಹನಗಳಲ್ಲಿ ಸಂಸೆ ತನಕ ಪ್ರಯಾಣಿಸಬಹುದು. ಕಳಸ,ಸಂಸೆಯಲ್ಲಿ ತಂಗಲು ಸಾಕಷ್ಟು ಹೋಮ್ ಸ್ಟೇಗಳು ಲಭ್ಯವಿದೆ. ಬಹುತೇಕ ಹೋಮ್ ಸ್ಟೇಗಳು ಚಾರಣಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ.

 
ನನ್ನ ಸ್ವಂತ ಅನುಭವದಲ್ಲಿ ಹೇಳುವುದಾದರೆ ಕುದುರೆಮುಖ ಚಾರಣ ಕುಮಾರ ಪರ್ವತ ಚಾರಣದಷ್ಟು ಕಠಿಣವಿಲ್ಲ. ಒಂಟಿಮರ ಹಾಗು ಶಿಖರದ ಬಳಿಯ ಹಾದಿ ಕಷ್ಟವಿರುವುದು ಬಿಟ್ಟರೆ ಬಹುತೇಕ ಹಾದಿ ಸುಲಭವಾಗಿದೆ. ಇಲ್ಲಿ ನನಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯ ಅಗತ್ಯವು ಬರಲಿಲ್ಲ. ಈ ಮೊದಲು ಕುಮಾರ ಪರ್ವತ ಹತ್ತಿದ ಅನುಭವದ ಆಧಾರದ ಮೇಲೆ ಈ ಚಾರಣಕ್ಕೆ ಬೇಕಾದ ತಯಾರಿಯನ್ನು ನಾನು ಮೊದಲು ಮಾಡಿಟ್ಟುಕೊಂಡಿದ್ದೆ. ದಾರಿ ಮಧ್ಯೆ ಸಾಗುವಾಗ ನೀರು ಕುಡಿಯುವುದು ಬಹಳ ಉತ್ತಮ. ಇದರಿಂದ ದೇಹದಲ್ಲಿ ನಿರ್ಜಲಿಕಾರಣ ಅಥವ ನಿತ್ರಾಣ ಆಗುವುದನ್ನು ತಡೆಯಬಹುದು.ದೇಹದ ನಿರ್ಜಲಿಕಾರಣ ಆದರೆ ಅರ್ಧದಲ್ಲೇ ಬಾಕಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಿ.

ಕುದುರೆಮುಖ ಶಿಖರದ ಚಾರಣ ದಾರಿಯಲ್ಲಿ ಸಂಸೆಯ ಬಾಳ್ಗಲ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುವುದು ಬಿಟ್ಟರೆ ಮತ್ತೆ ಸರಿಯಾಗಿ ಸಿಗುವುದು ಕುದುರೆಮುಖ ಶಿಖರದ ಬಳಿ. ಕುದುರೆಮುಖ ಶಿಖರದಲ್ಲಿ ಸೌರ ವಿದ್ಯುತ್ ಚಾಲಿತ ಮೊಬೈಲ್ ನೆಟ್‌ವರ್ಕ್ ಟವರ್ ಅನ್ನು ಅಳವಡಿಸಲಾಗಿದೆ. ಚಾರಣಕ್ಕೆ ಬರುವಾಗ ನಿಮ್ಮ ಕೈಯಲ್ಲಿ ಹಾಗು ತಂಡದ ಸದಸ್ಯರ ಬಳಿ 2000-5000ರೂ ಕ್ಯಾಶ್ ಇದ್ದರೆ ಒಳ್ಳೆಯದು. ಇಲ್ಲಿ ಯುಪಿಐ,ನೆಟ್ ಬ್ಯಾಂಕಿಂಗ್ ಯಾವುದು ಚಲಾವಣೆಯಲ್ಲಿ ಇಲ್ಲ.  

ಚಾರಣದ ಯೋಜನೆಯನ್ನು ರೂಪಿಸುವಾಗ ನನಗೆ ಚಾರಣದ ಮಾಹಿತಿಯನ್ನು ನೀಡಿದ್ದು ಅಲ್ಲದೆ ನನಗೆ ಹಾಗು ನನ್ನ ಗೆಳೆಯರಿಗೆ ಊಟ-ತಿಂಡಿ ಹಾಗು ರಾತ್ರಿ ತಂಗಲು ವ್ಯವಸ್ಥೆ ಮಾಡಿಕೊಟ್ಟ ನನ್ನ ದೊಡ್ಡಮ್ಮ ಶ್ರೀಮತಿ ಪಾರ್ವತಿ ಗಣೇಶ್ ಸಾಲಿನಮಕ್ಕಿ, ದೊಡ್ಡಪ್ಪ ಶ್ರೀ ಪ್ರಸನ್ನ ಗಣೇಶ್ ಜೋಯಿಸ ಸಾಲಿನಮಕ್ಕಿ ಹಾಗು ನಮ್ಮ ತಂಡದ ಜೊತೆಗೆ ಮಾರ್ಗದರ್ಶಕರಾಗಿ ಚಾರಣದುದ್ದಕ್ಕೂ ಬಂದ ಶ್ರೀ ಮಂಜುನಾಥ್ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

 
ಚಾರಣಕ್ಕೆ ಹೋದ ಸಂತೋಷ ಮಾತ್ರವಲ್ಲದೆ ಕರ್ನಾಟಕದ ಎರಡನೆಯ ಎತ್ತರದ ಶಿಖರ ಹತ್ತಿದ ಹೆಮ್ಮೆಯ ಕ್ಷಣಗಳನ್ನು ಅನುಭವಿಸಿದ ಸಾರ್ಥಕತೆ ಈಗ ನನಗೆ. ಈ ಸಂತೋಷದೊಂದಿಗೆ ಆ ಕ್ಷಣಗಳು,ಚಾರಣದ ಮಾಹಿತಿಯನ್ನು ಹಾಗು ನನ್ನ ಅನುಭವಗಳನ್ನು ಇಲ್ಲಿ ಹಂಚಿದ್ದೇನೆ.
 

ಪರಿಸರದ ಮಧ್ಯೆ ಸಮಯ ಕಳೆಯಲು ಇಷ್ಟ ಇರುವವರು,ಚಾರಣಕ್ಕೆ ಹೋಗುವ ಅಭ್ಯಾಸ ಇರುವವರಿಗೆ,ಯಾವುದೇ ಅನುಭವ ಇಲ್ಲದ ಚಾರಣಿಗರು(ಸ್ವಲ್ಪ ಕಡಿದಾದ ದಾರಿಯಲ್ಲಿ ನಡೆದು ಅಭ್ಯಾಸ ಇರುವವರು) ಕುದುರೆಮುಖ ಚಾರಣಕ್ಕೆ ಹೋಗಿ ಬರಬಹುದು. ನೀವು ಚಾರಣಕ್ಕೆ ಹೋಗಿ ಬನ್ನಿ! ಆದರೆ ಅಲ್ಲಿನ ಸ್ವಚ್ಛತೆ,ಪರಿಸರವನ್ನು ಕಾಪಾಡಿ!
ಬರಹ: ಶ್ರೀಕರ ಬಿ
 

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!