ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!

 

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!

 

ಇದು ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ಇಂಜನಿಯರಿಂಗ್ ಕಾಲೇಜು!ಕರ್ನಾಟಕದ ಅತ್ಯುತ್ತಮ ಇಂಜಿನಿಯರಿಂಗ ಕಾಲೇಜುಗಳ ಪಟ್ಟಿಯಲ್ಲಿ ಬರುವ ಕಾಲೇಜು ಇದು! ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಅಡ್ಯಾರ್ ಎಂಬಲ್ಲಿ ಎಡಕ್ಕೆ ನೋಡಿದರೆ ದೊಡ್ಡ ಕ್ಯಾಂಪಸ್ ಕಾಣಸಿಗುತ್ತದೆ. ದಕ್ಷಿಣ ಕನ್ನಡದ ಜೀವನದಿ,ಪವಿತ್ರವಾದ ನೇತ್ರಾವತಿ ನದಿಯ ಕಿನಾರೆಯಲ್ಲಿ,ಪ್ರಕೃತಿಯ ಸೌಂದರ್ಯದ ಮಧ್ಯೆ ಇರುವ ಈ ಕಾಲೇಜು ಬೇರೆ ಯಾವುದು ಅಲ್ಲ,ಅದುವೇ ನಮ್ಮ ಸಹ್ಯಾದ್ರಿ ಇಂಜನಿಯರಿಂಗ್ ಹಾಗು ಮ್ಯಾನೇಜ್‌ಮೆಂಟ್ ಕಾಲೇಜು! ಸಹ್ಯಾದ್ರಿ ಅರ್ಥಾತ್ ಪಶ್ಚಿಮ ಘಟ್ಟ! ಈ ಕಾಲೇಜು ವಿದ್ಯಾರ್ಥಿಗಳಿಗೆ ಅಕ್ಷರಶಃ ಪಶ್ಚಿಮ ಘಟ್ಟವೇ! ಹೇಗೆ ಪಶ್ಚಿಮ ಘಟ್ಟ ನಮ್ಮ ದಕ್ಷಿಣ ಭಾರತದ ನೈಸರ್ಗಿಕ ಸಂಪನ್ಮೂಲವೋ,ಹಲವು ನದಿಗಳ ಉಗಮ ಸ್ಥಾನವೋ ಅದೇ ರೀತಿ ಸಹ್ಯಾದ್ರಿ ಕಾಲೇಜು ಜ್ಞಾನ ಸಂಪನ್ಮೂಲ,ಭಾರತದ ತಂತ್ರಜ್ಞಾನ,ಇಂಜಿನಿಯರಿಂಗ್ ಕ್ಷೇತ್ರಕ್ಕೆ ಪ್ರತಿ ವರ್ಷ ಸಾವಿರಾರು ಇಂಜಿನಿಯರಿಂಗ್ ಗಳನ್ನು ಉತ್ಪಾದಿಸುವ,ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡುವ ವಿದ್ಯಾದೇಗುಲವಾಗಿದೆ. ಪ್ರಕೃತಿಯ ಸೌಂದರ್ಯವನ್ನು ತನ್ನೊಡನೆ ಇಟ್ಟುಕೊಂಡಿರುವ ಕಾರಣ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲು ಇದು ಪ್ರಶಸ್ತ ಸ್ಥಳ! ಇಂತಹ ಶ್ರೇಷ್ಠ ಕಾಲೇಜಿನಲ್ಲಿ ಇಂದು ಅದರ ವಿಭಾಗಗಳಲ್ಲಿ ಒಂದಾದ ಮಾಹಿತಿ ತಂತ್ರಜ್ಞಾನ ವಿಜ್ಞಾನ ಹಾಗು ಡೇಟಾ ವಿಜ್ಞಾನ ವಿಭಾಗೀಯ ಸಂಘದ ದಿನ! ಇದರ ಪ್ರಯುಕ್ತ ಇಂದು ಸಂಪೂರ್ಣ ದಿನ ಹಲವು ಕಾರ್ಯಕ್ರಮಗಳು! ಒಂತರ ಕಾಲೇಜು ಡೇ ಇದ್ದ ಹಾಗೆ! ಸಹ್ಯಾದ್ರಿಗೆ ಸೇರಿದ ನಂತರ ನಾನು ಪ್ರಥಮ ಬಾರಿಗೆ ಇಷ್ಟರ ಮಟ್ಟಿಗೆ ಶಾಮೀಲಾಗಿ ಆನಂದಿಸಿದ ಕಾರ್ಯಕ್ರಮವಿದು!
 
ಈ ಕಾರ್ಯಕ್ರಮದ ಬಗ್ಗೆ ವಿಭಾಗದ ಮುಖ್ಯಸ್ಥರಾದ ಡಾ. ಮುಸ್ತಾಫ ಬಸ್ತಿಕೋಡಿ ಸರ್ ಅವರು ಮೊದಲೇ ವಿಭಾಗಕ್ಕೆ ಸೇರಿದ ಪ್ರಯುಕ್ತ ನಡೆದ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದ್ದರು! ಆಗಲೇ ಉತ್ಸುಕನಾಗಿ ಕುಳಿತಿದ್ದೆ! ತದ ನಂತರ ನನ್ನ ಮಾರ್ಗದರ್ಶಕರಾದ ಶ್ರೀ ರಿತೇಶ್ ಪಕ್ಕಳ ಸರ್ ಅವರು ವಿಭಾಗದ ಸಂಘದ ಹೆಸರಿನ ಮೊದಲ ಅಕ್ಷರಕ್ಕೆ ಸಂಬಂಧಿಸಿದ ಒಂದು ಹೆಸರು ಹುಡುಕಲು ಹೇಳಿದಾಗ ಖುಷಿಯಾದೆ ಜೊತೆಗೆ ಉತ್ಸುಕತೆ ಇನ್ನು ಹೆಚ್ಚಾಯಿತು! ನಂತರ ನಿನ್ನೆ ನಮ್ಮ ತರಗತಿಯ ವಾಟ್ಸಾಪ್ ಗುಂಪಿನಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಂಚಿದಾಗ ಅದರಲ್ಲಿ ಕೆಲವು ಅತಿಥಿಗಳ ಹೆಸರು ಇತ್ತು. ಒಬ್ಬರು ಸಾಕ್ಸೋಫೋನ್ ಕಲಾವಿದರು,ರಾಷ್ಟ್ರೀಯ ಮಟ್ಟದಲ್ಲಿ ಸಂಗೀತ ಲೋಕದಲ್ಲಿ ಹೆಸರು ಮಾಡಿದವರಾಗಿದ್ದರೆ,ಮತ್ತೊಬ್ಬರು ಬೋಯಿಂಗ್ ಎಂಬ ದೈತ್ಯ ಕಂಪೆನಿಯಲ್ಲಿ ಉದ್ಯೋಗಿ,ರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿದವರು ಆಗಿದ್ದರು. ನನ್ನ ಕುತೂಹಲ ಇನ್ನು ಹೆಚ್ಚಾಯಿತು!
ನಮಗೆ ವಸ್ತ್ರ ಸಂಹಿತೆಯನ್ನು ಕೂಡ ಜಾರಿ ಮಾಡಲಾಗಿತ್ತು. ಆದ್ದರಿಂದ ಶಿಸ್ತಿನಿಂದಲೇ ಇರಬೇಕೆಂದು ನಾನು ಹೊಸ ಅಂಗಿಯನ್ನು ಖರೀದಿಸಿದ್ದೆ. ಇಷ್ಟೆಲ್ಲ ಸಿದ್ಧತೆ ಮಾಡಿರುವಾಗ ನನ್ನ ಉತ್ಸುಕತೆಯ ಮಟ್ಟ ಎಷ್ಟಿರಬೇಡ? ಅಂತು ಇಂತು ಇಂದಿನ ದಿನ ಬಂದೇ ಬಿಟ್ಟಿತು!
 
ಮುಂಜಾನೆ ಬೇಗ ಪುತ್ತೂರಿನಿಂದ ಹೊರಟು ಕಾಲೇಜಿಗೆ ಬಂದೆ! ಆರಂಭದಲ್ಲಿ ತರಗತಿಗೆ ಹೋಗಿ ಹಾಜರಾತಿ ತೆಗೆದ ನಂತರ ಸಭಾಂಗಣಕ್ಕೆ ಹೋಗಲು ಉಪನ್ಯಾಸಕರು ಹೇಳಿದರು. ಸಭಾ ಕಾರ್ಯಕ್ರಮದಿಂದ ಆರಂಭಗೊಂಡ ಕಾರ್ಯಕ್ರಮ ಮತ್ತೆ ಮತ್ತೆ ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ವೈಭವದತ್ತ ಸಾಗಿತು! ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಂದವರು ರಾಷ್ಟ್ರೀಯ ಮಟ್ಟದಲ್ಲಿ ಸಂಗೀತ ಕ್ಷೇತ್ರದಲ್ಲಿ ಹೆಸರನ್ನು ಪಡೆದ,ಪ್ರಸಿದ್ಧ ಸಾಕ್ಸೋಫೋನ್ ಕಲಾವಿದರಾದ ಅಂಜಲಿ ಶ್ಯಾನುಭೋಗ್ ಹಾಗು ಸಹ್ಯಾದ್ರಿ ಕಾಲೇಜಿನ ಹಳೆ ವಿದ್ಯಾರ್ಥಿ,ರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿದ,ಬೋಯಿಂಗ್ ಎಂಬ ದೈತ್ಯ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಶ್ರೇಯಾ ಕೊಟ್ಟಾರಿಯವರು. ಜೊತೆಗೆ ಕಾಲೇಜಿನ ಆಧಾರ ಸ್ತಂಭ,ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ರಾಜೇಶ ಸರ್,ನಮ್ಮ ವಿಭಾಗದ ನಾಯಕರು,ಮುಖ್ಯಸ್ಥರಾದ ಡಾ. ಮುಸ್ತಾಫ ಬಸ್ತಿಕೋಡಿ ಸರ್, ಸಂಘದ ಸಂಯೋಜಕರು,ವಿಭಾಗದ ಉಪನ್ಯಾಸಕರು,ನನ್ನ ಮಾರ್ಗದರ್ಶಕರಾದ ಶ್ರೀ ರಿತೇಶ್ ಪಕ್ಕಳ ಸರ್,ಸಂಘದ ನೂತನ ಉಪಾಧ್ಯಕ್ಷರಾದ ಶ್ರೀ ಮಧುರ್ ಅಣ್ಣ,ಕಾರ್ಯದರ್ಶಿಯಾದ ವಿವೇಕ್ ಅಣ್ಣ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದರು.ಕಾರ್ಯಕ್ರಮದ ಆರಂಭದಲ್ಲಿ ಸಂಘದ ಲಾಂಛನ ಅನಾವರಣ ಕಾರ್ಯಕ್ರಮ ನಡೆಯಿತು. ಲಾಂಛನ ಅನಾವರಣದ ವೀಡಿಯೋ ನನ್ನನ್ನು ಪುಳಕಿತನಾಗುವಂತೆ ಮಾಡಿತು! 

 
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಸಂಘದ ಸಂಯೋಜಕರಾದ ಶ್ರೀ ರಿತೇಶ್ ಪಕ್ಕಳ ಸರ್ ಮಾಡಿದರು. ನಂತರ ಮುಖ್ಯ ಅತಿಥಿಗಳಾದ ಅಂಜಲಿ ಶ್ಯಾನುಭೋಗರು ಪ್ರೋತ್ಸಾಹಕ ನುಡಿಗಳನ್ನು ಆಡಿದರು.ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ನುಡಿಗಳನ್ನು ಮಾತನಾಡಿ,ಸಂಘದ ನೂತನ ಪದಾಧಿಕಾರಿಗಳಿಗೆ ವಿಭಾಗದ ಮುಖ್ಯಸ್ಥರು,ಸಂಘದ ಅಧ್ಯಕ್ಷರಾದ ಡಾ. ಮುಸ್ತಾಫ ಬಸ್ತಿಕೋಡಿ ಸರ್ ಬೋಧಿಸಿದರು. ನಂತರ ಮತ್ತೊಬ್ಬ ಮುಖ್ಯ ಅತಿಥಿಗಳು,ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯು ಆಗಿರುವ ಶ್ರೇಯಾ ಕೊಟ್ಟಾರಿಯವರು ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ ವಿದ್ಯಾರ್ಥಿಗಳಿಗೆ ಕಿವಿಮಾತಗಳನ್ನು ಹೇಳಿದರು.

 
ಸಭಾ ಕಾರ್ಯಕ್ರಮ ನಡೆದ ನಂತರ ಅಂಜಲಿ ಶ್ಯಾನುಭೋಗರಿಂದ ಸಾಕ್ಸೋಫೋನ್ ಕಾರ್ಯಕ್ರಮ ನಡೆಯಿತು. ಅವರ ಸಾಕ್ಸೋಫೋನ್ ವಾದನ ಕಾರ್ಯಕ್ರಮದಲ್ಲಿ ನೆರೆದ ಎಲ್ಲರನ್ನು ಸಂಗೀತದಲ್ಲಿ ತೇಲಾಡುವಂತೆ ಮಾಡಿತು! ಕೊನೆಗೆ ವಿದ್ಯಾರ್ಥಿಗಳು ವಿನಂತಿ ಮಾಡಿದ ನಂತರ ವಿಶೇಷ ಮನವಿ ಮೇರೆಗೆ ಕನ್ನಡ ಚಿತ್ರರಂಗದಲ್ಲಿ ಅಬ್ಬರಿಸುತ್ತಿರುವ,ವಿಶ್ವಾದ್ಯಂತ ದಿಗ್ವಿಜಯ ಓಟ ಮುಂದುವರಿಸುತ್ತಿರುವ "ಕಾಂತಾರ" ಸಿನಿಮಾದ "ವರಾಹ ರೂಪಂ" ಪದ್ಯವನ್ನು ನುಡಿಸಿದರು! ಇದು ಅಲ್ಲಿ ನೆರೆದ ಎಲ್ಲರು ಏಕಾಗ್ರಚಿತ್ತದಿಂದ ಆಲಿಸುವಂತೆ ಮಾಡಿದು ಅಲ್ಲದೇ ಅವರ ಶ್ಲಾಘನೆಗೊಳಪಟ್ಟಿತು! ಮಧ್ಯಾಹ್ನ ಭೋಜನದ ನಂತರ ನಮ್ಮ ಕಾಲೇಜು ಕ್ಯಾಂಪಸಿನಲ್ಲಿರುವ ಮೆಕ್-ಟೆಕ್ ಗ್ಯಾರೇಜಿನ ಬಳಿಯಿಂದ ಸಭಾಂಗಣದ ತನಕ ಚೆಂಡೆಯ ಜೊತೆಗೆ ಮೆರವಣಿಗೆಯ ರೀತಿಯ ಕಾರ್ಯಕ್ರಮ ನಡೆಯಿತು. ಇದರಲ್ಲೇ ಗಮ್ಮತ್ತು ಇದ್ದದ್ದು. ಅಂದಾಜು 100-200 ಮೀಟರಷ್ಟು ದೂರ ಎರಡು ಕಟ್ಟಡದ ಮಧ್ಯೆ ಇರಬಹುದು. ಇಷ್ಟು ದೂರವನ್ನು ಚೆಂಡೆಯ ಜೊತೆಗೆ ನೆರೆದ ವಿದ್ಯಾರ್ಥಿಗಳು,ಉಪನ್ಯಾಸಕ ವೃಂದದವರು ಕುಣಿದು ಕುಪ್ಪಳಿಸುತ್ತಾ ಕ್ರಮಿಸಿದರು. ಪ್ರತಿ ವರ್ಷವು ಪ್ರತಿ ವಿಭಾಗದ ಕಾರ್ಯಕ್ರಮದಲ್ಲಿ ಇಂತದ್ದೆ ಕಾರ್ಯಕ್ರಮ ನಡೆದು,ಅದರಲ್ಲಿ ಕಾಲೇಜಿನ ಬೇರೆಬೇರೆ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು ಸಹ ನಾನು ಪ್ರಥಮ ವರ್ಷದಲ್ಲಿ ಹೋಗದವ ಈ ವರ್ಷ ಇಂದು ಗೆಳೆಯರ ಜೊತೆಗೆ ಕುಣಿದು ಕುಪ್ಪಳಿಸಿದೆ! 
 

 
ನಂತರ ಕಾಲೇಜಿನ ಕ್ಯಾಂಟೀನ್ ಬಳಿ ಚೆಂಡೆ-ವಯಲೀನ್ ಜುಗಲ್ಬಂದಿಯ ಕಾರ್ಯಕ್ರಮ! ಕೇಳುವಾಗಲೇ ಇದು ಒಂದಕ್ಕೊಂದು ಹೇಗೆ ಸಂಬಂಧ ಅಂತ ಅನಿಸಿರಬೇಕೆಲ್ಲವೇ? ಅದೇ ಗಮ್ಮತ್ತು! ಹಲವು ಪದ್ಯಗಳು ಶ್ರೀಜಿತ್ ಅವರ ವಯಲೀನ್ ವಾದನ ಹಾಗು ಎಸಬಿಬಿಕೆ ಚೆಂಡೆಯವರ ತಂಡದಿಂದ ಚೆಂಡೆ ವಾದನ,ನಮ್ಮ ವಿಭಾಗದ ಉಪನ್ಯಾಸಕರಾದ ಜಯಪದ್ಮಿನಿ ಮೇಡಂ ಅವರಿಂದ ಹಾಡು ಅದ್ಭುತವಾಗಿ ಮೂಡಿಬಂತು! ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು! ಇದರ ಮಧ್ಯೆ ನಮ್ಮ ವಿಭಾಗದ ಮಾಜಿ ಮುಖ್ಯಸ್ಥರಾದ ಶ್ರೀ ಶಮಂತ್ ರೈ ಸರ್ ಅವರ ಆಗಮನ ಕಾರ್ಯಕ್ರಮದ ಮೆರಗು,ವಿದ್ಯಾರ್ಥಿಗಳ ಆನಂದವನ್ನು ಇನ್ನಷ್ಟು ಹೆಚ್ಚಿಸಿತು! ತದ ನಂತರ ಸಭಾಂಗಣದಲ್ಲಿ ಮತ್ತೊಂದು ಸುತ್ತಿನ ವಯಲೀನ್-ಚೆಂಡೆಯ ಜುಗಲ್ಬಂದಿ ಕಾರ್ಯಕ್ರಮ ನಡೆದು ವಿಭಾಗದ ಪ್ರತಿ ವರ್ಷದ ತರಗತಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೊನೆಗೆ ಇದ್ದದ್ದೇ ವಿದ್ಯಾರ್ಥಿಗಳು ಕಾಯುತ್ತಿದ್ದ ಈಗಿನ ಟ್ರೆಂಡಿಂಗ್ ಆಗಿರುವ "ಬೈಲಾ" ಕಾರ್ಯಕ್ರಮ! ಹಲವು ಹಾಡುಗಳಿಗೆ ನೆರೆದ ಎಲ್ಲಾ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು! ಹೊತ್ತು ಹೋದದ್ದೇ ಗೊತ್ತಾಗಲಿಲ್ಲ! ಒಟ್ಟಾಗಿ ಹೇಳುವುದಾದರೆ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆದದ್ದು ಅಲ್ಲದೇ ಎಲ್ಲರ ಮೆಚ್ಚುಗೆಗು ಪಾತ್ರವಾಯಿತು.ನಾನು ಅಂತು ತುಂಬಾ ಆನಂದಪಟ್ಟೆ! ಕುಣಿದು ಕುಪ್ಪಳಿಸುತ್ತಿದ್ದಾಗ ಲೋಕದ ಪರಿಜ್ಞಾನವೇ ಇರಲಿಲ್ಲ,ಆ ಮಟ್ಟಿಗೆ ಕುಣಿದು,ಗೆಳೆಯರ ಜೊತೆಗೆ ಸಂಭ್ರಮಸಿದೆ!

 
ಈ ಕಾರ್ಯಕ್ರಮಕ್ಕೆ ಕಾರಣರಾದ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ವಿಶೇಷವಾಗಿ ನಾನು ನನ್ನ ಮಾರ್ಗದರ್ಶಕರಿಗೆ ಧನ್ಯವಾದ ಸಲ್ಲಿಸಲೇಬೇಕು! ಈ ಲೇಖನ ಬರೆಯಲು ಪ್ರೋತ್ಸಾಹಿಸಿದ್ದೇ ಅವರು! ನನ್ನ ಬರವಣಿಗೆಯ ಶೈಲಿ ನೋಡಿ ಸಂತೋಷಗೊಂಡು ಕಾರ್ಯಕ್ರಮದ ಬಗ್ಗೆಯೂ ಬರೆಯಲು ಹೇಳಿದರು. ನನ್ನ ಹಲವು ಬೆಳವಣಿಗೆಗೆ ಪ್ರತ್ಯಕ್ಷವಾಗಿ,ಪರೋಕ್ಷವಾಗಿ ಅವರೇ ಕಾರಣಕರ್ತರು. ಆದ್ದರಿಂದ ನನ್ನ ಮಾರ್ಗದರ್ಶಕರಾದ ಶ್ರೀ ರಿತೇಶ್ ಪಕ್ಕಳ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಒಟ್ಟು ಪ್ರತಿದಿನ ತರಗತಿ,ಲ್ಯಾಬ್ ಪಾಠದಿಂದ ಬೇಸೆತ್ತ ವಿದ್ಯಾರ್ಥಿಗಳಿಗೆ ರಿಫ್ರೆಶ್ ಆಗಲು ಸಹಾಯಕವಾಗಿರುವ ಇಂತಹ ಕಾರ್ಯಕ್ರಮಗಳು ಕಾಲೇಜಿನಲ್ಲಿ ನಡೆಯುತ್ತಾ ಇರಲಿ ಎಂದು ಆಶಿಸುತ್ತಾ ಈ ಲೇಖನಕ್ಕೆ ಮಂಗಳ ಹಾಡುತ್ತೇನೆ.
✍️ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ