ಗೆಳೆಯರೊಂದೆಗೆ ಒಂದು ದಿನದ ಪ್ರವಾಸ!
ಒಕ್ಟೋಬರ್ ತಿಂಗಳು ಬಂತೆಂದರೆ ಶಾಲೆಯಲ್ಲಿರುವಾಗ ದಸರ ರಜೆಯ ಮಜಾ! ನವರಾತ್ರಿಯ ಕಾಲವು ಹೌದು! ಈ ಸಂದರ್ಭಲ್ಲಿ ಮೊದಲೆಲ್ಲ ಒಂದು ತಿಂಗಳ ರಜೆ ಸಿಗುತ್ತಿತ್ತು. ಕಾಲಕ್ರಮೇಣ ಎರಡು ವಾರಗಳ ರಜೆಗೆ ಸೀಮಿತವಾಗಿ ಬೇಸಿಗೆಯ ರಜೆ ಒಂದುವರೆ ತಿಂಗಳ ರಜೆ ಆಯಿತು. ಈ ಎರಡು ವಾರಗಳಲ್ಲಿ ಒಂಬತ್ತು ದಿನಗಳು ನವರಾತ್ರಿ ಪೂಜೆಗೆ,ದೇವಸ್ಥಾನಗಳಿಗೆ ಹೋಗಲು,ಒಂದು ದಿನ ಅಜ್ಜಿ ಮನೆಗೆಂದು ಎಲ್ಲ ಹೋಗುವಾಗ ಮುಗಿದೇ ಬಿಡುತ್ತಿತ್ತು. ಎಂಜಿನಿಯರಿಂಗ್ ಕಾಲೇಜಿಗೆ ಬಂದ ಮೇಲೆ ದೊಡ್ಠ ರಜೆಗಳು ಸಿಗುವುದು ಅಪರೂಪ. ಸರಕಾರಿ ರಜೆಗಳು,ಕಾಲೇಜಿನ ವತಿಯಿಂದ ಸಿಗುವ ರಜೆಗಳು ಬಿಟ್ಟರೆ ಉಳಿದ ರಜೆಗಳು ಪ್ರತಿ ಸೆಮಿಸ್ಟರ್ ಬಳಿಕೆ ಸಿಕ್ಕಿದರೆ ಆಯಿತು ಇಲ್ಲದಿದ್ದರೆ ಆಗ ಇಂಟರ್ನ್ಶಿಪ್ ಇರುತ್ತದೆ. ಹೀಗಾಗಿ ಹೆಚ್ಚು ದಿನಗಳ ರಜೆಯ ಕನಸು ಕಾಣುವ ಹಾಗೆ ಇಲ್ಲ. ಇರುವ ರಜೆಗಳಲ್ಲಿ ಮನೆಯಲ್ಲಿ ಅಪ್ಪ-ಅಮ್ಮನ ಜೊತೆಗೆ ಕಾಲ ಕಳೆಯುವುದೋ,ಅಜ್ಜಿ ಮನೆಗೆ ಹೋಗಿ ಬರುವುದೋ,ಊರಿಗೆ ಹೋಗಿ ಬರುವುದೋ ಹೀಗೆ ರಜೆ ಕಳೆದು ಹೋಗುತ್ತದೆ. ಆದರೆ ಈ ಬಾರಿ ಪರೀಕ್ಷೆ ಮುಗಿದ ಮೇಲೆ ಇಂಟರ್ನ್ಶಿಪ್ ಬರುವ ಮೊದಲು ಸಿಕ್ಕ ನಾಲ್ಕು ದಿನಗಳ ರಜೆಯನ್ನು ಸ್ವಲ್ಪ ಭಿನ್ನವಾಗಿ ಕಳೆದೆ.
ಕಳೆದ ಬಾರಿ ನಾನು ಕುಟುಂಬದ ಜೊತೆಗೆ ಬೇಲೂರು,ಹಳೆಬೀಡು ಪ್ರವಾಸಕ್ಕೆ ಹೋಗಿ ಮರಳಿ ಚಾರ್ಮಾಡಿ ಘಾಟಿಯಾಗಿ ಬರುತ್ತಿರುವಾಗ ನಮ್ಮ ಗಾಡಿಯ ಡ್ರೈವರ್ ಇಲ್ಲಿ ನೇರವಾಗಿ ಮೇಲೆ ಕಾಣುವ ಆ ಶಿಖರ ದೇವರಮನೆ ಎಂದು ಹೇಳಿದ್ದರು. ಕೊಟ್ಟಿಗೆಹಾರದಿಂದ ಅಲ್ಲಿಗೆ ರಸ್ತೆಯ ಮೂಲಕ ಸುಲಭವಾಗಿ ಹೋಗಬಹುದು ಎಂದು ಹೇಳಿದ್ದರು. ನಮಗೆ ಆ ಸ್ಥಳದ ಬಗ್ಗೆ ಗೊತ್ತಿರದಿದ್ದ ಕಾರಣ ಅಲ್ಲಿಗೆ ಹೋಗಲಿಲ್ಲ. ಮನೆಗೆ ಬಂದು ಆ ಸ್ಥಳದ ಬಗ್ಗೆ ಗೂಗಲಿನಲ್ಲಿ ಹುಡುಕಿದೆ. ನಂತರ ಗೆಳೆಯರೊಂದಿಗೆ ಕಳೆದ ಬಾರಿ ಬಿಸಲೆ-ಪಟ್ಲಬೆಟ್ಚ ಪ್ರವಾಸಕ್ಕೆ ಹೋಗಿ ಬಂದ ಮೇಲೆ ಮುಂದೊಂದು ದಿನ ದೇವರಮನೆಗೆ ಹೋಗಲೇಬೇಕು ಎಂಬ ಆಸೆ ನನಗಿತ್ತು. ಹಾಗಾಗಿ ಪರೀಕ್ಷೆ ಮುಗಿಯುತ್ತಿರುವಾಗ ಗೆಳೆಯರ ಬಳಿ ನನ್ನ ದೇವರಮನೆ ಪ್ರವಾಸ ಯೋಜನೆಯ ಬಗ್ಗೆ ಹೇಳಿದೆ.ಪ್ರವಾಸದ ಯೋಜನೆ ಆಯಿತು,ಗೆಳೆಯರು ಒಪ್ಪಿಕೊಂಡರು. ಆದರೆ ಪ್ರವಾಸದ ಯೋಜನೆ ಹಾಕಿಕೊಂಡ ನನಗೆ ಇನ್ನು ಹೆಚ್ಚು ಸಮಯ ಸಿಗುವ ಕಾರಣ ಬೇಲೂರು-ಹಳೆಬೀಡಿಗೂ ಹೋಗಿ ಬಂದರೆ ಹೇಗೆ? ಎಂಬ ಯೋಚನೆ ಬಂತು. ಇದಕ್ಕೂ ಗೆಳೆಯರು ಒಪ್ಪಿಕೊಂಡರು. ನಂತರ ಮನೆಯಲ್ಲಿ ಹೇಳಿದಾಗ ಅಮ್ಮ ಡ್ರೈವಿಂಗ್ ಅಲ್ಲಿ ಅನುಭವ ಇರುವವರನ್ನು ಕರೆದುಕೊಂಡು ಹೋಗು ಇಲ್ಲದಿದ್ದರೆ ಘಾಟಿಯಲ್ಲಿ ಕಷ್ಟ,ಅದು ಕೂಡ ಚಾರ್ಮಾಡಿ ಘಾಟಿ! ಎಂದು ಕಾಳಜಿಯಿಂದ ಹೇಳಿದರು. ಸರಿ,ಎಂದು ನನ್ನ ಆಪ್ತಮಿತ್ರ ಕೀರ್ತಿಪ್ರಸಾದನಿಗೆ ಕರೆ ಮಾಡಿದೆ. ಅವನ ಒಪ್ಪಿಕೊಂಡ. ಅಲ್ಲಿಂದ ಶುರುವಾಯಿತು ಪ್ರವಾಸ ಕಥನ!
ಮೊನ್ನೆ ಅಂದರೆ 06.10.2023ರಂದು ಪುತ್ತೂರಿನಿಂದ ಮುಂಜಾನೆ ಬೇಗ ಹೊರಟು ಉಪ್ಪಿನಂಗಡಿಗೆ ಹೋದೆವು. ಅಲ್ಲಿ ಕೀರ್ತಿಪ್ರಸಾದನನ್ನು ಕರೆದುಕೊಂಡು ಉಜಿರೆ,ಚಾರ್ಮಾಡಿ ಮೂಲಕ ಬೇಲೂರಿಗೆ ಹೊರಟೆವು. ಉಜಿರೆಯಲ್ಲಿ ಬೆಳಗಿನ ತಿಂಡಿ ತಿಂದು ಪ್ರಕೃತಿಯ ಸೌಂದರ್ಯವು ಅಡಕಗೊಂಡಿರುವ ಚಾರ್ಮಾಡಿ ಘಾಟಿಯ ಮೂಲಕ ಪ್ರಯಾಣ ಬೆಳೆಸುತ್ತಾ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತ,ಘಾಟಿಯಲ್ಲಿ ಸಿಗುವ ಅಚಾನಕ್ ತಿರುವುಗಳಲ್ಲಿ ಕಾರನ್ನು ಜಾಗರೂಕತೆಯಿಂದ ಓಡಿಸುತ್ತಾ,ಚಾರ್ಮಾಡಿ ಘಾಟಿಯಲ್ಲಿರುವ ಶ್ರೀ ಅಣ್ಣಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಕೊಟ್ಟಿಗೆಹಾರ ತಲುಪಿದೆವು. ಕೊಟ್ಟಿಗೆಹಾರದಿಂದ ಗೆಳೆಯ ಕೀರ್ತೀಪ್ರಸಾದ ಕಾರನ್ನು ಓಡಿಸುತ್ತಾ ನಾನು ಹೋಗುವ ಮಾರ್ಗವನ್ನು ಸೂಚಿಸಿ ಹತ್ತು ಗಂಟೆಯ ಸುಮಾರಿಗೆ ಬೇಲೂರು ಶ್ರೀ ಚೆನ್ನಕೇಶವ ದೇವಸ್ಥಾನ ತಲುಪಿದೆವು. ಬೇಲೂರು ಶ್ರೀ ಚೆನ್ನಕೇಶವ ದೇವಸ್ಥಾನದ ಬಗ್ಗೆ ನಾನು ಈ ಮೊದಲು ಬರೆದಿದ್ದ ಲೇಖನದಲ್ಲಿ ವಿಸ್ತರವಾಗಿ ಹೇಳಿದ್ದೆ. ಹಾಗಾಗಿ ಮತ್ತೊಮ್ಮೆ ಇಲ್ಲಿ ಇತಿಹಾಸವನ್ನು ಉಲ್ಲೇಖಿಸುವುದಿಲ್ಲ. ಬೇಲೂರು ಚೆನ್ನಕೇಶವ ದೇವಸ್ಥಾನದ ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳುತ್ತ, ಕಟ್ಟಡ ನಿರ್ಮಾಣದ ಹಿಂದಿನ ತಾಂತ್ರಿಕ ವಿನ್ಯಾಸ ಹೇಗಿರಬಹುದು ಎಂದು ನಾವು ಊಹಿಸುತ್ತಾ ಚೆನ್ನಕೇಶವ ದೇವರಿಗೆ ನಮಿಸಿ,ಅಲ್ಲೆ ಆವರಣದಲ್ಲಿರುವ ಕಪ್ಪೆಚೆನ್ನಿಗರಾಯ,ಸೌಮ್ಯನಾಯಕಿ ದೇವರಿಗೂ ನಮಿಸಿ,ಕೊಂಚ ವಿಶ್ರಮಿಸಿ ಹಳೆಬೀಡು ಕಡೆ ಸಾಗಿದೆವು.
ಹಳೆಬೀಡು ತಲುಪಿದ ನಾವು ಅಲ್ಲಿ ಶ್ರೀ ಹೊಯ್ಸಳೇಶ್ವರ ದೇವಾಲಯದ ಸಂಕೀರ್ಣದ ವಾಸ್ತುಶಿಲ್ಪವನ್ನು ಕಂಡು ಚಕಿತಗೊಂಡು,ಆ ವಾಸ್ತುಶಿಲ್ಪವು ಹಾಳಾಗುತ್ತಿರುವುದನ್ನು ಕಂಡು ಬಹಳ ಬೇಸರಗೊಂಡೆವು. ಶ್ರೀ ಹೊಯ್ಸಳೇಶ್ವರ ದೇವರಿಗೂ,ಶಾಂತಲೇಶ್ವರ ದೇವರಿಗೂ ನಮಿಸಿ,ದೇವಸ್ಥಾನದ ಸಂಕೀರ್ಣವನ್ನು ವೀಕ್ಷಿಸುತ್ತಾ ಸಮಯದ ಅಭಾವ ಇದ್ದುದರಿಂದ ಅಲ್ಲಿಂದ ದೇವರಮನೆ ಕಡೆಗೆ ಪ್ರಯಾಣ ಬೆಳೆಸಿದೆವು. ಬೇಲೂರಿನ ಚೆನ್ನಕೇಶವ ದೇವಸ್ಥಾನದ ಇತಿಹಾಸ ಆಗಲಿ,ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನದ ಇತಿಹಾಸ ನಮಗೆ ಶಾಲೆಯಲ್ಲಿ ಸಮಾಜ ವಿಜ್ಞಾನದ ಪಾಠಗಳಲ್ಲಿ ಬಂದುದರಿಂದ ನಮಗೆ ಅದು ತಿಳಿದಿತ್ತು. ಹಾಗಾಗಿ ಇಲ್ಲಿ ಪಾಠಗಳಲ್ಲಿ ಬಂದ ವಿಷಯಗಳನ್ನು ಕಣ್ಣಾರೆ ನೋಡಿದೆವು.ದೇವರಮನೆ ಕಡೆಗೆ ಪ್ರಯಾಣ ಬೆಳೆಸಿದ ನಾವು ಚೀಕನಹಳ್ಳಿ ಎಂಬಲ್ಲಿ ಮಧ್ಯಾಹ್ನದ ಊಟ ಮುಗಿಸಿ ಪ್ರಯಾಣ ಬೆಳೆಸುತ್ತ ಬೈದುವಳ್ಳಿ ಕ್ರಾಸ್ ಮೂಲಕ ನೇರವಾಗಿ ದೇವರಮನೆ ತಲುಪಿದೆವು.
ದೇವರಮನೆಯ
ವಾಹನ ಪಾರ್ಕಿಂಗ್ ಸ್ಥಳದಿಂದ ದೇವರಮನೆ ಶಿಖರಕ್ಕೆ ಸುಮಾರು 300ಮಿ ನಡೆದುಕೊಂಡು
ಹೋಗಬೇಕು. ಇಲ್ಲಿ ನಿಮಗೆ ಎರಡು ಶಿಖರಗಳು ಕಾಣಸಿಗುತ್ತದೆ. ಉತ್ತರ ದಿಕ್ಕಿನಲ್ಲಿ ಅಂದರೆ ಪಾರ್ಕಿಂಗ್
ಸ್ಥಳದಿಂದ ಹತ್ತಿಕೊಂಡು ಬಲಬದಿಯಲ್ಲಿರುವ ಶಿಖರವನ್ನು ನಾವು ಏರಿದೆವು. ಅಲ್ಲಿಂದ
ದೇವರಮನೆ ಕಣಿವೆ/ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳ ಸೌಂದರ್ಯವನ್ನು ತುಂಬಾ ಚೆನ್ನಾಗಿ
ಕಣ್ತುಂಬಿಕೊಳ್ಳಬಹುದು. ಈ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯವದದ್ದು.
ಎಡಬದಿಯ ಶಿಖರ ಅಂದರೆ ದಕ್ಷಿಣಕ್ಕಿರುವ ಶಿಖರವೇರಿದರೆ ಇನ್ನೊಂದು ಕೋನದಿಂದ ಪರ್ವತ
ಶ್ರೇಣಿಗಳನ್ನು ನೋಡಬಹುದು. ನಾವು ಅಲ್ಲಿಗೆ ತಲುಪಿದಾಗ ಮಂಜು ಮುಸುಕಿದ ವಾತಾವರಣ
ಆರಂಭಗೊಂಡಿತು. ಜೊತೆಗೆ ಗಾಳಿಯು ಜೋರಾಗಿ ಬೀಸುತ್ತಿದ್ದ ಕಾರಣ ಆಗಾಗ ಮೋಡಗಳ ಚಲನೆಯನ್ನು
ನೋಡುತ್ತಾ ಮನಸ್ಸಿಗೆ ಮುದ ನೀಡುತ್ತಿತ್ತು. ಆಗಾಗ ಶುಭ್ರಗೊಳ್ಳುವ ವಾತಾವರಣವದಿಂದ
ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯ ಅತ್ಯುತ್ತಮ ನೋಟವನ್ನು ನೋಡಬಹುದಿತ್ತು. ಒಟ್ಟಿನಲ್ಲಿ
ಸುಮಾರು ಒಂದು ಗಂಟೆಯ ಕಾಲ ಅಲ್ಲಿ ನಾವು ಸಮಯ ಕಳೆದು ಪುತ್ತೂರಿನ ಕಡೆಗೆ
ಹಿಂದಿರುಗಿದೆವು. ದೇವರಮನೆ ಬೆಟ್ಟದ ಕೆಳಗೆ ಶ್ರೀ ಕಾಲಭೈರವೇಶ್ವರ ದೇವಸ್ಥಾನವಿದೆ.
ಸುಮಾರು 800 ವರ್ಷಗಳಷ್ಟು ಹಳೆಯ ದೇವಸ್ಥಾನವಿದು.ಬಹಳಷ್ಟು ಕುಟುಂಬಗಳ ಮನೆ ದೇವರು ಕೂಡ
ಆಗಿದ್ದಾರೆ. ನಾವು ದೇವರಮನೆ ತಲುಪುವಾಗ ದೇವಸ್ಥಾನದ ಬಾಗಿಲು ಮುಚ್ಚಿತ್ತು ಹಾಗು ಸಮಯದ
ಅಭಾವದಿಂದ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗಲೇ ದೇವರಿಗೆ ನಮಿಸಿ ಕೊಟ್ಟಿಗೆಹಾರ ಮೂಲಕ
ಪುತ್ತೂರಿನ ಕಡೆ ಪ್ರಯಾಣ ಬೆಳೆಸಿದೆವು.
ದೇವರಮನೆಯಿಂದ
ಹೊರಡುವಾಗ ನಾನು ಗೂಗಲ್ ಮ್ಯಾಪಿನಲ್ಲಿ ನೇರವಾಗಿ ಪುತ್ತೂರಿಗೆ ದಾರಿ ಹುಡುಕಿದ ಕಾರಣ
ಅದು ಯಾವುದೋ ಗುಡ್ಡಗಾಡಿನ ಮೂಲಕ ದಾರಿ ತೋರಿಸಿತು! ಇದನ್ನು ಸರಿಯಾಗಿ ಗಮನಿಸದ ನಾವು ಅದೇ
ದಾರಿಯಲ್ಲಿ ಪ್ರಯಾಣ ಬೆಳೆಸಿದಾಗ ಯಾವುದೋ ಒಂದು ಕಡಿದಾದ ದಾರಿಯನ್ನು ತಲುಪಿದೆವು.
ಇದರಿಂದ ಅನುಮಾನಗೊಂಡ ನಾವು ಅಲ್ಲಿ ಹತ್ತಿರದ ಮನೆಯವರ ಬಳಿ ಕೊಟ್ಟಿಗೆಹಾರಕ್ಕೆ ದಾರಿ
ಕೇಳಿ ಮ್ಯಾಪಿನಲ್ಲಿ ಕೊಟ್ಟಿಗೆಹಾರಕ್ಕೆ ದಾರಿ ಹುಡುಕಿ ದೇವರಮನೆಗೆ ಮರಳಿ ಬಂದು
ಕೊಟ್ಟಿಗೆಹಾರಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು! ಕೊಟ್ಟಿಗೆಹಾರ ತಲುಪಿದ ಬಳಿಕ
ನಾವು ಚಾರ್ಮಾಡಿ ಘಾಟಿ ಇಳಿಯುತ್ತಾ ಘಾಟಿಯಲ್ಲಿ ಕಾರು ನಿಲ್ಲಿಸಬಹುದಾದ ಒಂದು
ಪ್ರದೇಶದಲ್ಲಿ ನಿಲ್ಲಿಸಿ ಸ್ವಲ್ಪ ಹೊತ್ತು ವಿಶ್ರಮಿಸಿ,ಪ್ರಕೃತಿ ಸೌಂದರ್ಯವನ್ನು
ಕಣ್ತುಂಬಿಕೊಂಡು ಪುತ್ತೂರಿಗೆ ಮರಳಿದೆವು. ಕೀರ್ತೀಪ್ರಸಾದ ಉಪ್ಪಿನಂಗಡಿಯಲ್ಲಿ
ಇಳಿದುಕೊಂಡ. ಅಲ್ಲಿಂದ ಪುತ್ತೂರಿಗೆ ಕಾರಿನಲ್ಲಿ ನಾನು,ಗೆಳೆಯರಾದ ಆದಿತ್ಯ,ರೋಹನ್,ಸೃಜನ್
ಅವರ ಜೊತೆಗೆ ಮುಸ್ಸಂಜೆಯ ಹೊತ್ತಿಗೆ ಮರಳಿದೆವು. ಒಟ್ಟಿನಲ್ಲಿ ಈ ಪ್ರವಾಸವು ಮರೆಯಲಾಗದ
ಅನುಭವಗಳನ್ನು ಕಟ್ಟಿಕೊಟ್ಟಿತು. ಅದರಲ್ಲೂ ಚಾರ್ಮಾಡಿಯಲ್ಲಿ ಡ್ರೈವಿಂಗ್,ದೇವರಮನೆಯಲ್ಲಿ
ಕಳೆದ ಕ್ಷಣಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ!
ಬೇಲೂರು-ಹಳೆಬೀಡು ಪ್ರವಾಸ ಮಾಡುವವರಿಗೆ ನನ್ನ ಸಲಹೆ:
1. ಬೆಳಗ್ಗೆ ಆದಷ್ಟು ಬೇಗ ಹೊರಡುವಂತೆ ಯೋಜನೆ ರೂಪಿಸಿ. ಇದರಿಂದ ಸುಮಾರು 9:30 ಅಥವ 10 ಗಂಟೆಯ ಅಂದಾಜಿಗೆ ನೀವು ಬೇಲೂರು ತಲುಪಿದರೆ ಬೇಲೂರು,ಹಳೆಬೀಡಿನ ಸ್ಥಳಗಳನ್ನು ಮಧ್ಯಾಹ್ನ 12:30ರ ಒಳಗೆ ವೀಕ್ಷಿಸಿ ದೇವರಮನೆಗೆ ಹೋಗಿ ಮುಸ್ಸಂಜೆಯ ಹೊತ್ತಿಗೆ ಹಿಂದಿರುಗಬಹುದು.
2. ಬೇಲೂರು,ಹಳೆಬೀಡಿನ ಜೊತೆಗೆ ದೇವರಮನೆಯನ್ನು ಸೇರಿಸಿ ಮೂರು ಸ್ಥಳಗಳನ್ನು ಒಟ್ಟಿಗೆ ವೀಕ್ಷಿಸಿ. ಇದರಿಂದ ದೇವರಮನೆಗೆ ಹೋಗಿ ಅಲ್ಲಿ ಮಂಜು ಕವಿದ ವಾತಾವರಣ ಇದ್ದರೂ,ಹೋದದ್ದು ನಷ್ಟ ಎಂದು ಅನಿಸುವುದಿಲ್ಲ.
3. ಬೇಲೂರು,ಹಳೆಬೀಡಿಗೆ ಎರಡು ದಿನಗಳ ಪ್ರವಾಸ ಹಮ್ಮಿಕೊಂಡರೆ ಈ ಕೆಳಗಿನಂತೆ ಪ್ರವಾಸ ರೂಪಿಸಬಹುದು:
ಅ.ಬೇಲೂರು-ಹಳೆಬೀಡು-ಶ್ರವಣಬೆಳಗೊಳ
ಆ. ಧರ್ಮಸ್ಥಳ-ಬೇಲೂರು-ಹಳೆಬೀಡು-ಹೊರನಾಡು-ಶೃಂಗೇರಿ
ಈ ಒಂದು ದಿನದ ಪ್ರವಾಸವು ಹಲವು ಅನುಭವಗಳನ್ನು ಕೊಟ್ಟಿತು ಹಾಗು ಹಲವು ವಿಷಯಗಳನ್ನು ಕಲಿಯಲು ಸಹಕಾರಿಯಾಯಿತು. ಕುಟುಂಬದ ಜೊತೆಗೆ ಹೋದರೆ ಅಪ್ಪ-ಅಮ್ಮ ಅವರೇ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಕಾರಣ ನಾನು ತುಂಬಾ ಮಜಾ ಮಾಡುತ್ತಾ ಇರುತ್ತಿದ್ದೆ. ಅದೇ ಕೇವಲ ಗೆಳೆಯರ ಜೊತೆಗೆ ಹೋದರೆ ಒಬ್ಬೊಬ್ಬರು ಒಂದೊಂದು ಜವಾಬ್ದಾರಿಯನ್ನು ಹಂಚಿಕೊಂಡು ಹೋಗುವಾಗ ಹೊಸಹೊಸ ವಿಷಯಗಳನ್ನು ಕಲಿಯುತ್ತೇವೆ.
ಬರಹ: ಶ್ರೀಕರ ಬಿ
ಫೋಟೋ ಕೃಪೆ: ಆದಿತ್ಯ ನಾಯಕ್ ಹಾಗು ಸೃಜನ್ ರೈ
👌🏻👌🏻👌🏻👌🏻
ReplyDelete