ಭಾರತ ಜನನಿ! ನಿಜಕ್ಕೂ ಈ ವರ್ಷದ ಸೂಪರ್ ಹಿಟ್ ಪ್ರಸಂಗ!

ಭಾರತ ಜನನಿ! ನಿಜಕ್ಕೂ ಈ ವರ್ಷದ ಸೂಪರ್ ಹಿಟ್ ಪ್ರಸಂಗ!




"ಯಕ್ಷಗಾನ" ಇದು ದೇವರ ಸೇವೆ ಮಾಡುವ ಒಂದು ವಿಧಿ! ಕೇವಲ ಒಂದು ಪದವಲ್ಲ ಇದು. ಇದು ಒಂದು ಭಾವನೆ! ಎಷ್ಟೋ ಜನರ ಬದುಕನ್ನು ಕಟ್ಟಿಕೊಟ್ಟ ಕ್ಷೇತ್ರವಿದು! ಇಂತಹ ಪವಿತ್ರ ಕ್ಷೇತ್ರದಲ್ಲಿ ದುಡಿಯುವುದು,ಸೇವೆ ಮಾಡುವುದು ಎಂದರೆ ಸೌಭಾಗ್ಯ! ಯಕ್ಷಗಾನವನ್ನು ನೋಡಲು ಪುಣ್ಯ ಮಾಡಿರಬೇಕು ಎಂಬುದು ನನ್ನ ಅಭಿಪ್ರಾಯ! ಇಂತಹ ಶ್ರೇಷ್ಠ ಕ್ಷೇತ್ರದ ತೆಂಕುತಿಟ್ಟಿನಲ್ಲಿ ಬಹಳ ಹೆಸರುವಾಸಿಯಾಗಿರುವ ಮೇಳಗಳಲ್ಲಿ ಹನುಮಗಿರಿ ಮೇಳವು ಒಂದು! 
ಯಕ್ಷಗಾನ ರಂಗದಲ್ಲಿ ಬಹಳ ಹೆಸರು ಮಾಡಿದ,ದಿಗ್ಗಜ,ಅನುಭವಸ್ಥ,ಹಿರಿಯ,ಯುವ ಕಲಾವಿದರನ್ನು ಒಳಗೊಂಡ ಗಜ ಮೇಳ ಹನುಮಗಿರಿ ಮೇಳ! ನಾನು ಅತಿ ಹೆಚ್ಚು ಇಷ್ಟಪಡುವ ಮೇಳವು ಹೌದು! ಪ್ರತಿವರ್ಷವು ಮೇಳಗಳು ತಿರುಗಾಟಕ್ಕೆ ಅಣಿಯಾದಾಗ ನಾನು ಮೊದಲು ಹುಡುಕುವುದು ಹನುಮಗಿರಿ ಮೇಳದ ತಿರುಗಾಟ ಯಾವಾಗ ಆರಂಭ? ಪುತ್ತೂರು ಯಕ್ಷೋತ್ಸವ ಯಾವಾಗ? ನಾನು ಯಾವಾಗ ಆಟಕ್ಕೆ ಹೋಗಬಹುದು? ಎಂದು. ಈ ಗಜಮೇಳದ ಈ ವರ್ಷದ ನೂತನ ಪ್ರಸಂಗ "ಭಾರತ ಜನನಿ". 
ಭಾರತ ಜನನಿ! ಪ್ರಸಂಗದ ಹೆಸರು ಕೇಳುವಾಗಲೇ ಬಹಳ ಕುತೂಹಲ ನನಗೆ ಇತ್ತು. ಯಾವ ಕಥೆಯಾಗಿರಬಹುದು ಇದು? ಯಾವುದು ಈ ಕಥೆಯ ಪ್ರಮುಖ ಪಾತ್ರ? ಹೀಗೆಲ್ಲ ಹಲವು ಪ್ರಶ್ನೆಗಳು ನನ್ನಲ್ಲಿ ಮೂಡಿತ್ತು. ಮೇಳ ತಿರುಗಾಟಕ್ಕೆ ಹೊರಟು ಒಂದು ತಿಂಗಳಿನಲ್ಲಿ ಪುತ್ತೂರಿನಲ್ಲಿ ಯಕ್ಷೋತ್ಸವ ಆಯೋಜನೆಗೊಂಡಿತ್ತು. ಆದರೆ ಹಲವು ಕಾರಣಗಳಿಂದ ನಾನು ಯಕ್ಷಗಾನ ನೋಡುವ ಅವಕಾಶವನ್ನು ಕಳಕೊಂಡೆ! ಭಾರತ ಜನನಿ ಯಕ್ಷಗಾನ ನೋಡಬೇಕು ಎಂಬ ನನ್ನ ಆಸೆ ಅಲ್ಲೇ ಬಿತ್ತು! ನಂತರ ಆಸುಪಾಸಿನಲ್ಲಿ ಇದೇ ಪ್ರಸಂಗದ ಯಕ್ಷಗಾನ ಆಗಿದ್ದರೂ ನನಗೆ ಹೋಗಲು ಆಗಲಿಲ್ಲ. ನಿನ್ನೆ "ಭಾರತ ಜನನಿ" ಯಕ್ಷಗಾನ ಬಯಲಾಟದ ನೇರಪ್ರಸಾರವಿದೆ ಎಂದು ನನಗೆ ಗೊತ್ತಾದಾಗ ಬಹಳ ಆನಂದಪಟ್ಟೆ. ಇಂದಾದರು ಯಕ್ಷಗಾನ ನೋಡಬಹುದಲ್ಲಾ ಎಂಬ ಆನಂದ! ಹೀಗೆ "ಭಾರತ ಜನನಿ" ಯಕ್ಷಗಾನವನ್ನು ವೀಕ್ಷಿಸಿ ಈ ಪ್ರಸಂಗದ ಬಗ್ಗೆ ನನ್ನ ಮನಸ್ಸಿಗೆ ಅನಿಸಿದ್ದನ್ನು ಬರೆಯಬೇಕು ಎಂದು ನಿರ್ಧರಿಸಿದೆ!
"ಭಾರತ ಜನನಿ" ಪ್ರಸಂಗವು ಮಹತ್ತರವಾದ ಕಥೆಯನ್ನು ಒಳಗೊಂಡ ಪ್ರಸಂಗವಾಗಿದೆ. ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಒಬ್ಬನಾದ "ಕಾಳಿದಾಸ" ಬರೆದ "ಅಭಿಜ್ಞಾನ ಶಾಕುಂತಲ" ಎಂಬ ನಾಟಕವನ್ನು ಕೇಳಿ,ಓದಿ,ನಾಟಕವನ್ನು ನೀವು ಈ ಮೊದಲು ನೋಡಿರಬಹುದು. ಆ ಕಥೆ ಈ ಪ್ರಸಂಗದಲ್ಲಿ ಒಳಗೊಂಡಿದೆ. ಪ್ರಸಂಗದ ಆರಂಭ ಬ್ರಹ್ಮರ್ಷಿಯಾಗಬೇಕೆಂದು ತಪಸ್ಸು ಮಾಡುತ್ತಿರುವ ಮಷರ್ಷಿ ವಿಶ್ವಾಮಿತ್ರರ ತಪಸ್ಸನ್ನು ಕೆಡಿಸಬೇಕೆಂದು ದೇವೇಂದ್ರನಿಂದ ಸುರಲೋಕದ ಅಪ್ಸರೆ ಮೇನಕೆಗೆ ಆಜ್ಞೆಯಾಗುತ್ತದೆ. ಈ ಆಜ್ಞೆಯನ್ನು ಸ್ವೀಕರಿಸಿ ವಿಶ್ವಾಮಿತ್ರರ ತಪವನ್ನು ಕೆಡಿಸಲು ಮೇನಕೆ ಮನ್ಮಥ,ಮಾರುತರ ಜೊತೆಗೆ ತಪಸ್ಸು ಮಾಡುತ್ತಿರುವ ಸ್ಥಳಕ್ಕೆ ಬಂದು ತಪಸ್ಸು ಕೆಡಿಸುತ್ತಾರೆ. ವಿಶ್ವಾಮಿತ್ರರ ತಪಸ್ಸು ಭಂಗವಾದ ನಂತರ ಎಚ್ಚರಗೊಳ್ಳುವ ಅವರು ಮೇನಕೆಯನ್ನು ನೋಡಿ ಕಾಮಕ್ಕೆ ಒಳಗಾಗಿ ಮೇನಕೆಯ ಜೊತೆ ಇರಲು ಅವಳ ಬಳಿ ಕೇಳುತ್ತಾರೆ. ಕೊನೆಗೆ ಒಪ್ಪುವ ಮೇನಕೆ ವಿಶ್ವಾಮಿತ್ರರ ಜೊತೆಗೆ ಸ್ವಲ್ಪ ಕಾಲ ಭೂಲೋಕದಲ್ಲಿ ಇರುತ್ತಾಳೆ. ಅವರಿಗೆ ಒಂದು ಮಗುವಿನ ಜನನವಾಗುತ್ತದೆ. ಇಲ್ಲಿಯವರೆಗೆ "ವಿಶ್ವಾಮಿತ್ರ-ಮೇನಕೆ" ಎಂಬ ಪ್ರಸಂಗದಲ್ಲಿ ನೋಡಿ ತಿಳಿದ ನಮಗೆ ಮುಂದೆ ಏನಾಗುತ್ತದೆ ಎಂಬುದನ್ನು "ಭಾರತ ಜನನಿ" ಯಕ್ಷಗಾನ ತಿಳಿಸುತ್ತದೆ. ತಪಸ್ಸಿಗೆ ಹೋದ ವಿಶ್ವಾಮಿತ್ರರು,ಸ್ವರ್ಗಕ್ಕೆ ಹೋಗುವ ಮೇನಕೆ ಕಾಡಿನಲ್ಲಿ ತಮ್ಮ ಮಗುವನ್ನು ಬಿಡುತ್ತಾರೆ. ಈ ಮಗುವನ್ನು ಗಮನಿಸುವ ಕಣ್ವ ಮಹರ್ಷಿಗಳಿಗೆ, ಶಕುಂತ ಪಕ್ಷಿಗಳ ಮಧ್ಯೆ ಇರುವ ಈ ಮಗುವನ್ನು ಕಂಡು ಅವರಿಗೆ ಆಶ್ಚರ್ಯವಾಗುತ್ತದೆ. ಆ ಮಗುವನ್ನು ತನ್ನ ಆಶ್ರಮಕ್ಕೆ ತಂದು "ಶಕುಂತಲೆ" ಎಂಬ ಹೆಸರನ್ನು ಇಟ್ಟು ಸಲಹುತ್ತಾರೆ.ನಂತರ ಅವಳು ದೊಡ್ಡವಳಾದಾಗ ಕಾಡಿಗೆ ಭೇಟೆಗೆ ಎಂದು ಬರುವ ದುಷ್ಯಂತ ಚಕ್ರವರ್ತಿಯು ಇವಳನ್ನ ಕಂಡು ಮನಸೋತು ಗಾಂಧಾರ್ವ ವಿವಾಹವಾಗಿ ಶೀಘ್ರದಲ್ಲಿ ಅರಮನೆಗೆ ಕರೆಸಿಕೊಳ್ಳುತ್ತೇನೆ ಎಂದು ಶಕುಂತಲೆಗೆ ಮಾತು ಕೊಟ್ಟು ಅವಳಿಗೆ ತನ್ನ ಅಭಿಜ್ಞಾನ ಉಂಗುರವನ್ನು ಕೊಟ್ಟು ಮರಳಿ ಬರುತ್ತಾನೆ. ದುಷ್ಯಂತನ ನಿರೀಕ್ಷೆಯಲ್ಲಿ ಶಕುಂತಲೆ ದಿನ ಕಳೆಯುತ್ತಾಳೆ. ಮಹರ್ಷಿ ದೂರ್ವಾಸರ ಶಾಪದಿಂದ ದುಷ್ಯಂತನಿಗೆ ಶಕುಂತಲೆಯ ಎಲ್ಲಾ ನೆನಪುಗಳು ಇಲ್ಲವಾಗುತ್ತದೆ. ದುಷ್ಯಂತನನ್ನು ನೋಡಲು ಅರಮನೆಗೆ ಹೋಗುವ ಶಕುಂತಲೆಯನ್ನು ಹಾಗು ಅವಳ ಜೊತೆಗೆ ಹೋದವರನ್ನು ದುಷ್ಯಂತನು ನಿಂದಿಸುತ್ತಾನೆ. ದುಷ್ಯಂತನಿಗೆ ಉಂಗುರ ತೊರಿಸಲು ಎಂದು ಕೈ ಎದುರು ಹಿಡಿದಾಗ ದುಷ್ಯಂತನು ಕೊಟ್ಟ ಉಂಗುರವು ತನಗರಿವಿಲ್ಲದೆ ನದಿಯಲ್ಲಿ ಸ್ನಾನ ಮಾಡುವಾಗ ಕಳೆದುಹೋದದ್ದು ಗೊತ್ತಾಗಿ ಬಹಳ ದುಃಖಿಸಿ ಮರಳಿ ಬರುತ್ತಾಳೆ. ನಂತರ ಮಹರ್ಷಿ ಕಶ್ಯಪರ ಆಶ್ರಮದಲ್ಲಿ ದಿನ ಕಳೆಯುವ ಅವಳಿಗೆ ಪುತ್ರನ ಜನನವಾಗುತ್ತದೆ. ಶಕುಂತಲೆಯ ಮಗನಾದ ಭರತನು ವಯಸ್ಸಾದಂತೆ ಬೆಳೆಯತೊಡಗಿದನು.ಹುಲಿ ಸಿಂಹಗಳ ಬಾಯಿಗಳನ್ನು ತೆರೆದು ಮತ್ತು ಅದರಲ್ಲಿನ ಹಲ್ಲುಗಳನ್ನು ಎಣಿಸುವುದು ಅವನ ಕ್ರೀಡೆಯಾಗಿತ್ತು. ಈ ಮಧ್ಯೆ ಮೀನುಗಾರನು ಹಿಡಿದ ಒಂದು ಮೀನಿನ ಹೊಟ್ಟೆಯಲ್ಲಿ ರಾಜಮನೆತನದ ಉಂಗುರವನ್ನು ಕಂಡು ದುಷ್ಯಂತನಿಗೆ ಆಶ್ಚರ್ಯವಾಯಿತು. ರಾಜಮನೆತನದ ಮುದ್ರೆಯನ್ನು ಗುರುತಿಸಿದ ಅವನು ಅರಮನೆಗೆ ತೆಗೆದುಕೊಂಡು ಹೋದನು ಆ ಉಂಗುರವನ್ನು ನೋಡಿದ ಮೇಲೆ ದುಷ್ಯಂತನಿಗೆ ಶಕುಂತಲೆಯ ನೆನಪಾಗುತ್ತದೆ. ತಕ್ಷಣವೇ ಆಕೆಯನ್ನು ಕಂಡುಕೊಳ್ಳಲು ಹೊರಟನು ಮತ್ತು ಆಕೆಯ ತಂದೆಯ ಆಶ್ರಮಕ್ಕೆ ಬಂದನು, ಅವಳು ಅಲ್ಲಿ ಇಲ್ಲದಿರುವುದನ್ನು ತಿಳಿದು ಹುಡುಕಲು ಮುಂದಾದನು. ಅವನು ತನ್ನ ಹೆಂಡತಿಯನ್ನು ಕಂಡುಕೊಳ್ಳಲು ಅರಣ್ಯದಲ್ಲಿ ಆಳವಾಗಿ ಮುಂದುವರೆದು ಕಾಡಿನಲ್ಲಿನ ಮಧ್ಯ ಭಾಗಕ್ಕೆ ಬಂದು ಒಂದು ಆಶ್ಚರ್ಯಕರ ದೃಶ್ಯವೊಂದನ್ನು ಕಂಡನು. ಚಿಕ್ಕ ಹುಡುಗನೊಬ್ಬ ಸಿಂಹದ ಬಾಯಿಯನ್ನು ತೆರೆದು ಅದರ ಹಲ್ಲುಗಳನ್ನು ಎಣಿಸುತ್ತಿದ್ದನು. ಅದನ್ನು ನೋಡಿ ಈತ ಯಾರೋ ಅರಸನ ಹುಡುಗನೇ ಇರಬೇಕೆಂದುಕೊಂಡ, ಅವನ ಧೈರ್ಯ ಮತ್ತು ಶಕ್ತಿ ನೋಡಿ ಆಶ್ಚರ್ಯಚಕಿತನಾದನು ಮತ್ತು ಹತ್ತಿರ ಬಂದು ಅವನ ಹೆಸರನ್ನು ಕೇಳಿದನು. ಆ ಹುಡುಗನು ನಾನು ವಿಶ್ವಾಮಿತ್ರರ ಪುತ್ರಿ ಶಕುಂತಲೆಯ ಮಗನಾದ ಭರತನೆಂದು ಉತ್ತರಿಸಿದಾಗ ಅವನು ಆಶ್ಚರ್ಯಚಕಿತನಾದನು. ನಂತರ ಆ ಹುಡುಗನು ಅವನನ್ನು ಶಕುಂತಲೆಯ ಹತ್ತಿರ ಕರೆದೊಯ್ದನು. ದುಷ್ಯಂತನನ್ನು ನೋಡಿದ ಶಕುಂತಲೆಯು ದುಷ್ಯಂತ ಅರಮನೆಗೆ ಬರಲು ಹೇಳಿದಾಗ ತನ್ನ ಸಾಕು ತಂದೆ ಕಣ್ವ ಮಹರ್ಷಿಗಳ ಅಪ್ಪಣೆ ಇಲ್ಲದೆ ನಾನು ಬರಲಾರೆ ಎಂದು ಹೇಳಿದಾಗ ಸ್ವತಃ ಕಣ್ವ ಮಹರ್ಷಿಗಳು ಅವಳನ್ನು ಅರಮನೆಗಿ ಕಳುಹಿಸಲು ಬರುತ್ತಾರೆ. ಅರಮನೆಗೆ ಹೋದ ಎಲ್ಲರೂ ತಮ್ಮ ಮಗ ಭರತನನ್ನು ಮುಂದಿನ ಉತ್ತರಾಧಿಕಾರಿಯೆಂದು ಘೋಷಿಸಿ ಅವನಿಗೆ ಪಟ್ಟಾಭಿಷೇಕ ಮಾಡಿ ಅದನ್ನು ಪ್ರಶ್ನಿಸಲು ಬಂದ ದುಷ್ಯಂತನ ಹಿರಿಯ ಮಗ ಜನಮೇಜಯನಿಗೆ ಮನವರಿಕೆ ಮಾಡುವುದರೊಂದಿಗೆ ಕಥೆ ಮುಗಿಯುತ್ತದೆ. 
ಇನ್ನು ನನ್ನ ಅನಿಸಿಕೆಗಳ ಬಗ್ಗೆ ಹೇಳುವುದಾದರೆ ಸಂಪೂರ್ಣ ಯಕ್ಷಗಾನದಲ್ಲಿ ನನಗೆ ಅತಿ ಹೆಚ್ಚು ಇಷ್ಟವಾದ ಪಾತ್ರ ಶಕುಂತಲೆ. ಈ ಪಾತ್ರವನ್ನು ನಿರ್ವಹಿಸಿದವರು ಪ್ರಸಿದ್ಧ ಸ್ತೀವೇಷಧಾರಿ,ನನ್ನ ನೆಚ್ಚಿನ ಕಲಾವಿದರಲ್ಲೊಬ್ಬರಾದ ಶ್ರೀ ಸಂತೋಷ್ ಕುಮಾರ್ ಹಿಲಿಯಾಣ ಅವರು. ಅವರ ಅಭಿನಯ ಅದ್ಭುತವಾದದ್ದು. ಶಬ್ದಗಳಲ್ಲಿ ಹೇಗೆ ಹೇಳುವುದೆಂದು ಗೊತ್ತಾಗುತ್ತಿಲ್ಲ! ಆ ಭಾವನಾತ್ಮಕ ಸನ್ನಿವೇಶಗಳು! ದುಃಖದ ಸನ್ನಿವೇಶ! ದುಷ್ಯಂತನ ಕಾಯುವಿಕೆ! ಛೇ! ಎಂತಹ ಅಭಿನಯ! ನಾನು ಕೂಡ ಕೂಗಿಬಿಟ್ಟೆ! ಅವರಿಗೆ ಹೇಳಿ ಮಾಡಿಸಿದ ಪಾತ್ರ ಶಕುಂತಲೆ! ವಿಶ್ವಾಮಿತ್ರರಾಗಿ ಪಾತ್ರ ನಿರ್ವಹಿಸಿದವರು ಮಾತಿನ ಮಲ್ಲ, ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಾದ ಶ್ರೀ ವಾಸುದೇವ ರಂಗ ಭಟ್ ಅವರು.ನಿಜಕ್ಕೂ ಅವರನ್ನು ಮಾತಿನಲ್ಲಿ ಸೋಲಿಸಲು ಅಸಾಧ್ಯ! ವಿಶ್ವಾಮಿತ್ರ-ಮೇನಕೆಯರ ಸಂಭಾಷಣೆಯಲ್ಲಿ ಸ್ವಲ್ಪ ಹಾಸ್ಯವನ್ನು ಸೇರಿಸಿ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸಿದರು. ಮೇನಕೆಯಾಗಿ ನಾಟ್ಯಮೂರಿ ಶ್ರೀ ರಕ್ಷಿತ್ ಪಡ್ರೆಯವರು ಅತ್ಯುತ್ತಮವಾಗಿ ಪಾತ್ರ ನಿರ್ವಹಿಸಿದರು. ಆರಂಭದಲ್ಲಿ ಅಪ್ಸರೆಯರು ಹೇಗೆ ಮುನಿಗಳ ತಪಸ್ಸು ಕೆಡಿಸುತ್ತಿದ್ದರು ಎಂದು ಕಥೆಯಲ್ಲಿ ನಾವು ಕೇಳಿದ್ದೇವೊ ಅದು ಹೀಗಿರಬಹುದು ಎಂದು ಕಲ್ಪಿಸುವಂತೆ ಮಾಡಿದರು. ವಿಶ್ವಾಮಿತ್ರ-ಮೇನಕೆ ಭಾಗದಲ್ಲಿ ವಿಶ್ವಾಮಿತ್ರನ ಜೊತೆಗೆ ಕಾಮದ ಭಾವನೆಯಲ್ಲಿರುವ ಮೇನಕೆ,ನಂತರ ಶಕುಂತಲೆಯ ಅಸಹಾಯಕತೆಯನ್ನು ಕಂಡು ಮರುಗುವ ದೃಶ್ಯವಿದೆಯಲ್ಲ ಆಗ ಪ್ರೇಕ್ಷಕರ ಕಣ್ಣಿನಲ್ಲಿ ನೀರು ತರಿಸಿಯೇ ತರಿಸುತ್ತದೆ. ನಾರದರಾಗಿ ಹನುಮಗಿರಿ ಮೇಳದ ಪ್ರಸಿದ್ಧ,ಯುವ ಕಲಾವಿದ ಶ್ರೀ ಪ್ರಸಾದ್ ಸವಣೂರು ಅವರು ನಿರ್ವಹಿಸಿದರು.ಪ್ರಸಾದಣ್ಣನ ಅಭಿನಯ ಮೆಚ್ಚುವಂತದ್ದು. ನಾರದ ಹೇಗೆ ಇರುವವನು,ಹೇಗೆ ಇನ್ನೊಬ್ಬರಲ್ಲಿ ಸುದ್ದಿಯನ್ನು ಮುಟ್ಟಿಸಿ,ಅವರ ಪರಿವರ್ತನೆ ಮಾಡುತ್ತಾನೆ,ಕೆಲವು ಕಥೆಗಳಲ್ಲಿ ಜಗಳ ಸೃಷ್ಟಿಯಾಗುವಲ್ಲಿಯವರೆಗೆ ನಾರದನ ಪಾತ್ರ ಇರುತ್ತದೆ ಎಂದು ನಾವು ಕೇಳಿದ್ದೇವೆ. ಇಲ್ಲಿ ಕಾಮದ ಭಾವನೆಯಲ್ಲಿರುವ ವಿಶ್ವಾಮಿತ್ರರನ್ನು ಎಚ್ಚರಿಸಿ ಅವರು ತಪಸ್ಸನ್ನು ಮುಂದುವರಿಸುವಂತೆ ನಾರದ ಮಹರ್ಷಿಗಳು ಹೇಳುವ ಸನ್ನಿವೇಶ ಬರುತ್ತದೆ. ಆ ಸನ್ನಿವೇಶ,ವಿಶ್ವಾಮಿತ್ರರ ಜೊತೆ ಸಂಭಾಷಣೆಯ ಸನ್ನಿವೇಶ ಇವೆಲ್ಲವನ್ನು ಉತ್ತಮವಾಗಿ ಕೊಂಡೊಯ್ಯುವಲ್ಲಿ ಪ್ರಸಾದಣ್ಣ ಯಶಸ್ವಿಯಾದರು. ದುರ್ಜಯನಾಗಿ ತೆಂಕುತಿಟ್ಟಿನ ಆಲ್ ರೌಂಡರ್ ಕಲಾವಿದ ಎಂದೇ ಹೆಸರುವಾಸಿಯಾಗಿರುವ ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆಯವರ ಪಾತ್ರ.ಬಹಳ ಚೆನ್ನಾಗಿ ಅವರು ಈ ಪಾತ್ರವನ್ನು ನಿರ್ವಹಿಸಿದರು. ಮೊದಲನೆಯ ದುರ್ಜಯನಾಗಿ ಪ್ರಸಿದ್ಧ ಪುಂಡು ವೇಷಧಾರಿ ಶ್ರೀ ದಿವಾಕರ ರೈ ಸಂಪಾಜೆಯವರದ್ದು. ಶುಕ್ರನಂದನೆ ಪ್ರಸಂಗದಲ್ಲಿ ಮೊದಲನೆಯ ರಾಜ ಯಯಾತಿಯ ಪಾತ್ರವನ್ನು ಇವರು ಹೇಗೆ ಚೆನ್ನಾಗಿ ನಿರ್ವಹಿಸಿದ್ದರೋ ಅದೇ ರೀತಿಯ ಅಭಿನಯ ನಾನು ನಿನ್ನೆಯೂ ನೋಡಿದೆ(ಇದು ನನ್ನ ಪ್ರಾಮಾಣಿಕ ಅಭಿಪ್ರಾಯ). ಶಕುಂತಲೆ ಜೊತೆಗೆ ಮಾತುಕತೆ,ಭೇಟೆಗೆ ಹೋಗುವ ಸನ್ನಿವೇಶ ಇವೆಲ್ಲವನ್ನು ಅತ್ಯುತ್ತಮವಾಗಿ ಕೊಂಡೊಯ್ದರು. ಕಣ್ವ ಮಹರ್ಷಿಗಳಾಗಿ ಹಿರಿಯ ಕಲಾವಿದ ಶ್ರೀ ಪೆರ್ಲ ಜಗನ್ನಾಥ ಶೆಟ್ಟಿಯವರು ಅತ್ಯುತ್ತಮವಾಗಿ ನಿರ್ವಹಿಸಿದರು.ತಂದೆಯಾಗಿ ಮಗಳ ಸುಖ-ದುಃಖಗಳಲ್ಲಿ ಭಾಗಿಯಾಗಿ ಅವಳ ಕಷ್ಟ ಪರಿಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವರಿಗೆ ಇರುತ್ತದೆ. ಇವೆಲ್ಲವನ್ನು ತಮ್ಮ ಅಭಿನಯದಲ್ಲಿ ತೊರಿಸಿಕೊಟ್ಟವರು ಇವರು. ದುರ್ಜಯನ ಮಗ ಬರ್ಬರಾಸುರನಾಗಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಾದ ಶ್ರೀ ಜಗದಾಭಿರಾಮ ಪಡುಬಿದ್ರೆಯವರು ನಿರ್ವಹಿಸಿದರು. ಸಮಯದ ಅಭಾವವಿದ್ದರು ಸಿಕ್ಕ ಸಮಯದಲ್ಲಿ ಅತ್ಯುತ್ತಮವಾಗಿ ಪಾತ್ರ ನಿರ್ವಹಿಸಿ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಟ್ಟರು. ಬರ್ಬರನ ಸಖನಾಗಿ ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆಯವರು ಮತ್ತೆ ರಂಗಸ್ಥಳಕ್ಕೆ ಬಂದರು! ದುಃಖದ ಸನ್ನಿವೇಶಗಳಲ್ಲಿ ಮುಳುಗಿರುವ ಪ್ರೇಕ್ಷಕರು,ಹೊಟ್ಟೆ ಹುಣ್ಣಾಗಿಸುವಷ್ಟು ನಗುವಂತೆ ಮಾಡಿದರು ಇವರು! ಇದೆಯಲ್ಲವೇ ರೋಚಕ ಕಥೆ! ದುಃಖದ ಸನ್ನಿವೇಶ ಒಮ್ಮೆಯಾದರೆ ಅಲ್ಲೇ ಬರುವ ಹಾಸ್ಯದ ಸನ್ನಿವೇಶ! ಜೊತೆಯಲ್ಲಿ ಜಗದಾಭಿರಾಮರು ಸೇರಿ ಹಾಸ್ಯ ಚಟಾಕಿಯನ್ನು ಹಾರಿಸಿದರು! ಎರಡನೆಯ ದುರ್ಜಯ ಚಕ್ರವರ್ತಿಯಾಗಿ ಪ್ರಸಿದ್ಧ ಕಲಾವಿದರಾದ ಶ್ರೀ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಪಾತ್ರ ನಿರ್ವಹಿಸಿದರು. ಅವರ ಪಾತ್ರ,ಅಭಿನಯ ನಿಜಕ್ಕೂ ಮೆಚ್ಚುವಂತದ್ದು. ಆ ಭಾವನಾತ್ಮಕ ಸನ್ನಿವೇಶಗಳಲ್ಲಿ ಭಾವನೆಗಳನ್ನು ಮೂಡಿಸಲು ಅವರಿಂದ ಮಾತ್ರ ಸಾಧ್ಯ! ಬಹಳ ಉತ್ತಮ ರೀತಿಯಲ್ಲಿ ಈ ಪಾತ್ರವನ್ನು ಅವರು ನಿರ್ವಹಿಸಿದರು. ಕೊನೆಯ ಭಾಗದಲ್ಲಿ ಬರುವ ಸಿಂಹದ ಪಾತ್ರವನ್ನು ನಿರ್ವಹಿಸಿದವರು ಪ್ರಸಿದ್ಧ ಬಣ್ಣದ ವೇಷಧಾರಿ ನನ್ನ ನೆಚ್ಚಿನ ಬಣ್ಣದ ವೇಷಧಾರಿಯಾದ ಶ್ರೀ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರು. ಶೆಟ್ಟಿಗಾರರನ್ನು ಬೇರೆ ಯಾರಿಗೆ ಹೋಲಿಸಲು ಸಾಧ್ಯವಿಲ್ಲ! ಹೋಲಿಸುವಷ್ಟು ದೊಡ್ಡವನು ನಾನಲ್ಲ! ನನಗೆ ಯಾವಾಗಲು ಅವರು ನಿರ್ವಹಿಸುವ ಪಾತ್ರಗಳನ್ನು ನೋಡುವುದೆಂದರೆ ಅದೊಂದು ಸಂಭ್ರಮ! ಈ ಪ್ರಸಂಗದಲ್ಲೂ ಅಷ್ಟೇ ಮೃಗರಾಜ ಸಿಂಹಕ್ಕೆ ಹೇಗೆ ಗಾಂಭೀರ್ಯ ಇರಬೇಕೋ ಹಾಗೆ ಅದನ್ನು ಅವರು ಪಾತ್ರದಲ್ಲಿ ನಿರ್ವಹಿಸಿದರು.ಭರತ(ಸರ್ವದಮನ) ಹಾಗು ಮನ್ಮಥನ ಪಾತ್ರವನ್ನು ನಿರ್ವಹಿಸಿದವರು ಯುವ,ಉದಯೋನ್ಮುಖ ಕಲಾವಿದರಾದ ಶ್ರೀ ಶಿವರಾಜ್ ಬಜಕೂಡ್ಲು ಅವರು. ಉತ್ತಮ ನಿರ್ವಹಣೆಯೆಂದೇ ಹೇಳಬಹುದು. ಮನ್ಮಥನಾಗಿ ವಿಶ್ವಾಮಿತ್ರ,ಮೇನಕೆಯರಲ್ಲಿ ಪ್ರೀತಿ ಹುಟ್ಟಿಸುವ ಕೆಲಸ ಮಾಡಿದರೆ ಕೊನೆಗೆ ಶಕುಂತಲೆಯ ಮಗನಾದ ಭರತನ ಪಾತ್ರದಲ್ಲಿ ಬರ್ಬರನ ಜೊತೆಗೆ ಕಾದಾಟ, ಸಿಂಹದ ಜೊತೆಗೆ ಗೆಳೆತನ,ಆಟದ ಸನ್ನಿವೇಶಗಳನ್ನು ತುಂಬಾ ಚೆನ್ನಾಗಿ ನಿರ್ವಹಿಸಿದರು. ಹಾಸ್ಯದಲ್ಲಿ ಈ ಪ್ರಸಂಗದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವವರು ಶ್ರೀ ಪ್ರಜ್ವಲ್ ಅವರೇ ಎಂದು ನನಗೆ ಅನಿಸುತ್ತದೆ. ಹಾಗಂತ ಹಾಸ್ಯ ಕಲಾವಿದರಾದ ಶ್ರೀ ಬಂಟ್ವಾಳ ಜಯರಾಮ ಆಚಾರ್ಯ ಹಾಗು ಶ್ರೀ ಸೀತಾರಾಮ ಕಟೀಲು ಅವರ ಪಾತ್ರ ಅಷ್ಟು ಇಷ್ಟ ಆಗಲಿಲ್ಲ ಎಂದು ಅಲ್ಲ. ಚಿನ್ನದ ಆಚಾರಿಯಾಗಿ ಶ್ರೀ ಜಯರಾಮ ಆಚಾರ್ಯ ಅವರು ಕಾಣಿಸಿಕೊಂಡರೆ, ಸಾರಂದ್ವತ ಹಾಗು ಮೀನುಗಾರನ ಪಾತ್ರದಲ್ಲಿ ಶ್ರೀ ಸೀತಾರಾಮ ಕಟೀಲು ಅವರು ಕಾಣಿಸಿಕೊಂಡರು. ಇದರಲ್ಲಿ ಸಾರಂದ್ವತನ ಪಾತ್ರ ಗಂಭೀರ ಪಾತ್ರವಾದ್ದದ್ದು. ಗುರು ಕಣ್ವ ಮಹರ್ಷಿಯ ಅಪ್ಪಣೆಯಂತೆ ಶಕುಂತಲೆಯನ್ನು ದುಷ್ಯಂತನ ಅರಮನೆಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಅವನ ಮೇಲೆ ಇರುತ್ತದೆ. ಮೀನುಗಾರನ ಪಾತ್ರದಲ್ಲಿ ಅವರು ತಮ್ಮ ಹಾಸ್ಯದ ಕೌಶಲವನ್ನು ತೋರಿಸಿಬಿಟ್ಟರು. ಚಿನ್ನದ ಆಚಾರಿ ಹಾಗು ಮೀನುಗಾರರ ಹಾಸ್ಯದ ಸಂಭಾಷಣೆಯು ಉತ್ತಮವಾಗಿತ್ತು.ಕೊನೆಗೆ ಬರುವ ಜನಮೇಜಯನ ಪಾತ್ರದಲ್ಲಿ ಶ್ರೀ ಪ್ರಸಾದ್ ಸವಣೂರು,ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡ ಮೇಳದ ಉಳಿದ ಎಲ್ಲಿ ಕಲಾವಿದರು ಅತ್ಯುತ್ತಮವಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದರು. ಪ್ರೇಕ್ಷಕರಿಗೆ ಮಧ್ಯದಲ್ಲಿ ಎಲ್ಲೂ ನಿರಾಸೆಯಾಗದಂತೆ ಅತ್ಯುತ್ತಮವಾಗಿ ಪ್ರಸಂಗವನ್ನು ಕೊಂಡೊಯ್ದರು.ಹಿಮ್ಮೇಳದ ಬಗ್ಗೆ ಹೇಳಬೇಕೆಂದೇ ಇಲ್ಲ. ಅತ್ಯುತ್ತಮ ಹಿಮ್ಮೇಳದ ತಂಡ ಈ ಮೇಳದಲ್ಲಿದೆ.ಭಾಗವತರಾದ ಗಾನಸುರಭಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಹಾಗು ಶ್ರೀ ಚಿನ್ಮಯ್ ಭಟ್ ಕಲ್ಲಡ್ಕ ಅವರ ಸ್ವರ,ರಾಗ,ಭಾಗವತಿಕೆಯ ಬಗ್ಗೆ ಒಂದು ಮಾತಿಲ್ಲ! ಅತ್ಯುತ್ತಮ ಭಾಗವತಿಕೆ ಯಕ್ಷಗಾನದ ಸೊಗಸನ್ನು ಇನ್ನು ಹೆಚ್ಚಿಸಿತು.ಇದಕ್ಕೆ ಸಾಥ್ ಕೊಡುವಂತೆ ಚೆಂಡೆ-ಮದ್ದಳೆಯ ಜೋಡಿ ಉತ್ತಮವಾಗಿತ್ತು. ಚೆಂಡೆಯಲ್ಲಿ ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್,ಶ್ರೀ ಚೈತನ್ಯಕೃಷ್ಣ ಪದ್ಯಾಣ ಅವರು ಇದ್ದರೆ,ಮದ್ದಳೆಯಲ್ಲಿ ಶ್ರೀ ಶ್ರೀಧರ ವಿಟ್ಲ,ಶ್ರೀ ಲವ ಕುಮಾರ್ ಐಲ,ಚಕ್ರತಾಳದಲ್ಲಿ ಶ್ರೀ ನಿಶ್ವತ್ ಜೋಗಿ ಜೋಡುಕಲ್ಲು ಅವರು ಕಲಾಮಾತೆಯ ಸೇವೆಗೈದರು. ಒಟ್ಟಿನಲ್ಲಿ ಈ ಯಕ್ಷಗಾನ ಬಯಲಾಟ ಅತ್ಯುತ್ತಮವಾಗಿ ಮೂಡಿಬರುವಲ್ಲಿ ಬಹಳ ಯಶಸ್ವಿಯಾಯಿತು. ಪ್ರೇಕ್ಷಕರ ಕಣ್ಣಿಗೆ ಹಬ್ಬ,ರಸದೌತಣ ನೀಡಿವುದರಲ್ಲಿ ಯಾವುದೇ ಅನುಮಾನ ಇಲ್ಲ! ಭಾರತ ಜನನಿ ಈ ವರ್ಷದ ಸುಪರ್ ಹಿಟ್ ಪ್ರಸಂಗ! ನೋಡಲು ಬೇಕು ಎಂದು ಹೇಳುವುದನ್ನು ನಾನು ಕೇಳಿದ್ದೆ. ನಿಜಕ್ಕೂ ಇದು ಸುಪರ್ ಹಿಟ್ ಪ್ರಸಂಗ! ಇಂತಹ ಅತ್ಯುತ್ತಮ ಕಥೆಯನ್ನು ಆಯ್ದು ಪ್ರೇಕ್ಷಕರಿಗೆ ರಸದೌತಣ ನೀಡುತ್ತಾ ಕಲಾಮಾತೆಯ ಸೇವೆಯನ್ನು ಮಾಡುತ್ತಿರುವ ಹನುಮಗಿರಿ ಮೇಳಕ್ಕೆ,ಮೇಳದ ಎಲ್ಲಾ ಕಲಾವಿದರಿಗೆ ಶುಭವಾಗಲಿ! ಕಥೆಯ, ಯಕ್ಷಗಾನ ಬಯಲಾಟದ ವಿಮರ್ಶೆ ಮಾಡುವಷ್ಟು ದೊಡ್ಡವನೂ,ಯೋಗ್ಯನೂ ನಾನಲ್ಲ. ಆದರೆ ನನಗೆ ಅನಿಸಿದ್ದನ್ನು ನಾನು ಬರೆದಿದ್ದೇನೆ. ನಿಮಗೂ ಈ ಲೇಖನ ಇಷ್ಟವಾಗಿರಬಹುದು ಎಂದು ನಾನು ಭಾವಿಸುತ್ತೇನೆ
||ಭದ್ರಂ ಶುಭಂ ಮಂಗಳಂ||
🖊 ಶ್ರೀಕರ ಬಿ

Comments

Post a Comment

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!